
ಹೊಸನಗರ: ಸಮಾಜದ ಏಳಿಗೆ ಹಾಗೂ ಊರಿನ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕೋಟೆಗಾರ್ ವಿದ್ಯಾವರ್ಧಕ ಸಂಘ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಶಶಿಧರ್ ನಾಯ್ಕ್ ಹೇಳಿದರು.

ಹೊಸನಗರದ ಸೀತಾರಾಮಚಂದ್ರ ಸಭಾಭವನ ಆವರಣದಲ್ಲಿ ನಡೆದ ಕೋಟೆಗಾರ್ ವಿದ್ಯಾವರ್ಧಕ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ವತಿಯಿಂದ ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಬಡವರ ಕಲ್ಯಾಣಕ್ಕಾಗಿ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಸ್ವಜಾತಿಯಲ್ಲಿ ಯಾರಾದರೂ ಮೃತಪಟ್ಟರೆ ಅವರ ಕುಟುಂಬಕ್ಕೆ ಶವಸಂಸ್ಕಾರ ನೆರವಿಗಾಗಿ ₹3 ಸಾವಿರ ಧನಸಹಾಯ ನೀಡಲಾಗುತ್ತಿದೆ. ಜೊತೆಗೆ ಗಣಪತಿ ಉತ್ಸವ, ದಸರಾ, ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕ ಅನ್ನಸಂತರ್ಪಣೆಯನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಕೈಗೊಳ್ಳುವ ಉದ್ದೇಶವಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಪಿ.ಆರ್. ಸಂಜೀವ, ಉಪಾಧ್ಯಕ್ಷರಾದ ಡಾ. ದಿನಮಣಿ, ಕೋಡಿ ಚಂದ್ರಶೇಖರ, ಹೆಚ್.ವಿ. ಮಹಾಬಲ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಸುರೇಶ್, ಹೆಚ್. ಶ್ರೀನಿವಾಸ್, ಸಹ ಕಾರ್ಯದರ್ಶಿ ಕೆ.ಜಿ. ನಾಗೇಶ್ ಸೇರಿದಂತೆ ವಿಠೋಬಾ ನಾಯ್ಕ, ಮಂಜುನಾಥ, ಬೇಕರಿ ಸುಬ್ರಹ್ಮಣ್ಯ, ಅನಿಲ್ ಕುಮಾರ್, ಪಿ. ಮನೋಹರ, ಮಾವಿನಕೊಪ್ಪ ಗಣೇಶ, ಮಾಧವ, ಗೋವಿಂದರಾಯ, ಎಂ.ಪಿ.ಎನ್. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

















Leave a Reply