
ಹೊಸನಗರ: ರಾಷ್ಟ್ರಿಯ ಹೆದ್ದಾರಿ-766ಸಿ ಕಾಮಗಾರಿಯಿಂದ ಮನೆ ಕಳೆದುಕೊಂಡಿರುವ ಬಡ ಕುಟುಂಬಕ್ಕೆ ಪರ್ಯಾಯ ಜಾಗ ಕಲ್ಪಿಸಿ ಬದುಕಲು ಅವಕಾಶ ನೀಡುವಂತೆ ಹೊಸನಗರ ತಾಲ್ಲೂಕಿನ ಮಾವಿನಕೊಪ್ಪ ಗ್ರಾಮದ ನಾಗಪ್ಪ ಹಾಗೂ ನಾಗರಾಜ್ ಅವರು ತಹಶೀಲ್ದಾರ್ ಭರತ್ರಾಜ್ ಹಾಗೂ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಪತ್ರದಲ್ಲಿ, “ನಾವು ಹೊಸನಗರ ತಾಲ್ಲೂಕು ಕಸಬಾ ಹೋಬಳಿಯ ಮಾವಿನಕೊಪ್ಪ ಗ್ರಾಮದ ಶಿವಮೊಗ್ಗ-ಹೊಸನಗರ ರಸ್ತೆಯ ಪಕ್ಕದಲ್ಲಿ ಜೀವಿತಾವಧಿಯವರೆಗೆ ವಾಸವಿದ್ದು, ಈ ನಿವೇಶನ ಹೊರತುಪಡಿಸಿ ಬೇರೆ ಯಾವುದೇ ಜಾಗ ಅಥವಾ ಮನೆ ಹೊಂದಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ-766ಸಿ ಯೋಜನೆ ಜಾರಿಯಾಗಿದ್ದು, ನಮ್ಮ ಜಾಗಕ್ಕೆ ಸಂಬಂಧಿಸಿದಂತೆ ನೋಟಿಸ್ ಹಾಗೂ ಅವಾರ್ಡ್ ಪತ್ರ ಬಂದಿತ್ತು. ಆದರೆ ಜಾಗಕ್ಕೆ ಕಡಿಮೆ ಪರಿಹಾರ ನಿಗದಿಪಡಿಸಿರುವುದರಿಂದ ಈ ಹಿಂದೆ ಸಕ್ಷಮ ಪ್ರಾಧಿಕಾರ, ತಹಶೀಲ್ದಾರ್ ಕಚೇರಿ, ಸಾಗರ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ,” ಎಂದು ತಿಳಿಸಿದ್ದಾರೆ.
“ನಮ್ಮ ಜಾಗದ ನಿಖರ ದಾಖಲೆಗಳ ಕೊರತೆಯಿಂದ ಅಲ್ಪ ಪ್ರಮಾಣದ ಪರಿಹಾರ ಹಣ ಮಾತ್ರ ಲಭಿಸಿದ್ದು, ಅದರಲ್ಲಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈಗ ಮನೆ ಹಾಗೂ ಜಾಗ ಎರಡನ್ನೂ ಕಳೆದುಕೊಂಡು ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ. ಸರ್ವೆ ನಂಬರ್ ೧೩ರಲ್ಲಿ ನಾವು ವಾಸವಿದ್ದು, ಮನೆಯ ಪಕ್ಕದಲ್ಲೇ ಸರ್ಕಾರಿ ಜಾಗ ಹಾಗೂ ಸರ್ಕಾರಿ ಬಾವಿ ಇದೆ. ಆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಕ್ಕುಪತ್ರ ನೀಡಬೇಕು,” ಎಂದು ಮನವಿಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಭರತ್ರಾಜ್ ಹಾಗೂ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್ ಅವರು, “ನೀವು ತಿಳಿಸಿರುವ ಜಾಗವನ್ನು ಪರಿಶೀಲಿಸಿ ಅದು ಸರ್ಕಾರಿ ಜಾಗವಾಗಿದ್ದರೆ ನಿವೇಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಂಜುನಾಥ್ ಉಪಸ್ಥಿತರಿದ್ದರು.


















Leave a Reply