
ಹೊಸನಗರ: ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಇ.ಬಿ ಸರ್ಕಲ್ ಸಮೀಪದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಹುಂಡಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣವನ್ನು ಹೊಸನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಕಳುವಾದ ಬೈಕ್ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹೊಸನಗರ ಪಟ್ಟಣದ ನಗರ ರಸ್ತೆಯಲ್ಲಿರುವ ಗುರುಶಕ್ತಿ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಕುರಿತು ಪ್ರಕಾಶ್ ಬಸವಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 26/2026ರಡಿ ಪ್ರಕರಣ ದಾಖಲಾಗಿತ್ತು.

ಇದರ ಜೊತೆಗೆ, ನಗರ ರಸ್ತೆಯ ಕೆ.ಇ.ಬಿ ಸರ್ಕಲ್ ಪಕ್ಕದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಹುಂಡಿಯಲ್ಲಿದ್ದ ಹಣ ಕಳವು ಮಾಡಿರುವ ಕುರಿತು ದೇವಸ್ಥಾನದ ಪ್ರತಿನಿಧಿ ಮಹೇಶ್ ಗಡ್ಲಪ್ಪ ಅವರು ನೀಡಿದ ದೂರಿನ ಮೇರೆಗೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಡಿವೈಎಸ್ಪಿ ಹಾಗೂ ತೀರ್ಥಹಳ್ಳಿ ಉಪವಿಭಾಗದ ಮಾರ್ಗದರ್ಶನದಲ್ಲಿ ಹೊಸನಗರ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಹೊಸನಗರ ಪೊಲೀಸ್ ಠಾಣೆಯ ಪಿಎಸ್ಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಸತೀಶ್ ರಾಜ್, ಮಾಯಪ್ಪ ಗೋಕಾವಿ ಹಾಗೂ ಗೋಪಾಲ್ ಸೇರಿದಂತೆ ಸಿಬ್ಬಂದಿ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಭದ್ರಾವತಿ ಮೂಲದ ಮೂರ್ತಿ ವಿ @ ಕತ್ತೆಮೂರ್ತಿ (28) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತ ಆರೋಪಿಯಿಂದ ಸುಮಾರು ₹60 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ಕಳ್ಳತನ ಮಾಡಿದ್ದ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೊಸನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

















Leave a Reply