
ಹೊಸನಗರ: ಕಾಂಗ್ರೆಸ್ ಪಕ್ಷದ ಕಷ್ಟಕರ ದಿನಗಳಲ್ಲಿ ಪಕ್ಷದ ಬೆಳವಣಿಗೆಗಾಗಿ ಶ್ರಮಿಸಿದ ಹುಣಸಳ್ಳಿ ಚಂದ್ರಶೇಖರಯ್ಯ ಅವರು ಬಡವರು, ದೀನ ದಲಿತರು ಹಾಗೂ ರೈತರ ಅಭಿವೃದ್ಧಿಗಾಗಿ ದೇವರಂತೆ ಸೇವೆ ಸಲ್ಲಿಸಿದ ನಾಯಕರು ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ ಹೇಳಿದರು.
ಬುಧವಾರ ನಿಧನರಾದ ಹುಣಸಳ್ಳಿ ಚಂದ್ರಶೇಖರಯ್ಯ ಅವರ ಸ್ಮರಣಾರ್ಥ ಹೊಸನಗರದ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, “ಹೊಸನಗರ ತಾಲ್ಲೂಕು ಬಡತನ ಮತ್ತು ಹಿಂದುಳಿದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಚಂದ್ರಶೇಖರಯ್ಯ ಅವರು ಜನಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಡವರು, ದೀನ ದಲಿತರು ಹಾಗೂ ರೈತರ ಏಳ್ಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಸೇವೆ ಹಾಗೂ ಜನಪರ ಕಾರ್ಯಗಳು ತಾಲ್ಲೂಕಿನ ಜನರ ಮನಸ್ಸಿನಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯಲಿವೆ ಎಂದು ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಚಿದಂಬರ, ಹಿರಿಯ ಮುಖಂಡ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಟಿಎಪಿಸಿಎಂಎಸ್ ಘಟಕದ ಅಧ್ಯಕ್ಷ ಕೆ.ಎಸ್. ಗುರುರಾಜ್, ಬೃಂದಾವನ ಪ್ರವೀಣ್, ಶುಭಾಕರ್, ಇಕ್ಬಾಲ್, ಚಂದ್ರಮೂರ್ತಿ, ಜಯನಗರ ಗುರು, ಬಾಳೆಕೊಪ್ಪ ಗಣೇಶ್, ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















Leave a Reply