ಸಾಂಸ್ಕೃತಿಕ ಶಿಬಿರದ ಸಮಾರೋಪ ಸಮಾರಂಭ
ಹೊಸನಗರ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆದು ಅರಳಿಸಲು ಬೇಸಿಗೆ ಸಾಂಸ್ಕೃತಿಕ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಇಲ್ಲಿ ಕಲಿತ ಸಂಗೀತ, ನೃತ್ಯ, ಕಲೆ, ಭಜನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ಹೊಸನಗರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ ಹೇಳಿದರು.
ತಾಲ್ಲೂಕಿನ ಗ್ರಾಮಭಾರತಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರಣಗಿರಿಯ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳ ತೊಡಗಿಸಿಕೊಳ್ಳುವಿಕೆ ಹೆಚ್ಚಿದಂತೆ ಸಂಸ್ಕಾರವೂ ಬೆಳೆದು ನಮ್ಮ ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಾಲ್ಕು ದಿನಗಳ ಕಾಲ ನಡೆದ ಶಿಬಿರದಲ್ಲಿ ಸುಮಾರು 25 ಮಕ್ಕಳು ಭಾಗವಹಿಸಿ ಸಂಗೀತ, ರಂಗೋಲಿ, ಕ್ಲೇ ಮಾದರಿ, ಭಜನೆ, ಚಿತ್ರಕಲೆ, ನೃತ್ಯ, ಕ್ರಾಫ್ಟ್ ಹಾಗೂ ದೇಶಿ ಆಟಗಳನ್ನು ಅಭ್ಯಾಸಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಶಿಬಿರದ ನಿರ್ದೇಶಕಿ ವಿದುಷಿ ಶ್ವೇತಾ ಜೋಯಿಸ್, ಗ್ರಾಮಪಂಚಾಯತ್ ಮಾಜಿ ಸದಸ್ಯ ಹಾಗೂ ರಾಷ್ಟ್ರೋತ್ಥಾನ ಬಳಗದ ಸಂಚಾಲಕ ಹನಿಯ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೋಷಕರ ಪರವಾಗಿ ಶ್ರೀಮತಿ ಮಾಧುರಿ ಮಾತನಾಡಿ, “ನಾನು 30 ವರ್ಷಗಳ ಹಿಂದೆ ಇದೇ ಸಂಸ್ಥೆಯ ಶಿಶುಮಂದಿರ ವಿದ್ಯಾರ್ಥಿಯಾಗಿದ್ದೆ. ಬಳಿಕ ಇದೇ ಶಿಬಿರದಲ್ಲಿ ಭಾಗವಹಿಸಿದ್ದೆ. ಇದೀಗ ನನ್ನ ಮಗನೂ ಇದೇ ಶಿಬಿರದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಶಿಬಿರದ ಉದ್ಘಾಟನೆಯನ್ನು ಭರತನಾಟ್ಯ ವಿದುಷಿ ಶ್ರೀಮತಿ ಆರತಿ ಮಹೇಶ್ ನೆರವೇರಿಸಿ, ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಇಂತಹ ಶಿಬಿರಗಳು ಮಕ್ಕಳಿಗೆ ಬಹಳ ಉಪಯುಕ್ತವಾಗಿದ್ದು, ಪೋಷಕರು ಇದರ ಸದುಪಯೋಗ ಪಡೆಯಲು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಶ್ರೀಮತಿ ವಿದ್ಯಾ, ನಾಗೇಂದ್ರ, ಶ್ರೀಮತಿ ದೀಪ ಹರ್ಷ, ವಿದುಷಿ ಆರತಿ ಮಹೇಶ್, ವಿದುಷಿ ಶ್ವೇತಾ ವಿಷ್ಣು ಜೋಯಿಸ್, ನಾಗರಾಜ್ ಹಾಗೂ ಗುರುಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.
ಆಕೃತಿ ಕಾರ್ಯಕ್ರಮವನ್ನು ನಿರೂಪಿಸಿ, ಅಚಲ ಪ್ರಾರ್ಥನೆ ಸಲ್ಲಿಸಿ, ವಿನಾಯಕ ಪ್ರಭು ವಂದಿಸಿದರು.















Leave a Reply