ಹೊಸನಗರ: ರಾಜ್ಯಕ್ಕೆ ಬೆಳಕು ನೀಡಲು ವರಾಹಿ, ಶರಾವತಿ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದರೂ, ತಾಲೂಕಿನ ಜನತೆಗೆ ಇಂದಿಗೂ ಸಮರ್ಪಕ ವಿದ್ಯುತ್ ಸೌಲಭ್ಯ ಸಿಗದೇ ಇರುವ ಪರಿಸ್ಥಿತಿ ಉಂಟಾಗಿದೆ. ತಾಲೂಕು ಕೇಂದ್ರದಲ್ಲೇ ಇದುವರೆಗೆ 110 ಕೆವಿ ವಿದ್ಯುತ್ ಕೇಂದ್ರ ಸ್ಥಾಪನೆ ಆಗದಿರುವುದು ಜನರ ದೌರ್ಭಾಗ್ಯವಾಗಿದೆ.
ಹೊಸನಗರ ಪಟ್ಟಣಕ್ಕೆ 110 ಕೆವಿ ವಿದ್ಯುತ್ ಕೇಂದ್ರ ಸ್ಥಾಪನೆ ಮಾಡುವಂತೆ ಆಗ್ರಹಿಸಿ ನಿರಂತರ ಹೋರಾಟ ಮುಂದುವರಿಸಲಾಗುತ್ತಿದ್ದು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಏಪ್ರಿಲ್ 4ರಂದು ಶನಿವಾರ ಹೊಸನಗರ ಮಾವಿನಕೊಪ್ಪ ಸರ್ಕಲ್ನಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಕಳೂರು ರಾಮೇಶ್ವರ ಕೃಷಿ ಪಟ್ಟಿನ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್. ವಿನಯ್ ಕುಮಾರ್ ತಿಳಿಸಿದ್ದಾರೆ.

ಅವರು ಸಂಘದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಸುಮಾರು 60 ವರ್ಷಗಳ ಹಿಂದೆ ನಿರ್ಮಾಣಗೊಂಡ 33 ಕೆವಿ ವಿದ್ಯುತ್ ಕೇಂದ್ರವೇ ಹೊಸನಗರದ ಪಾಲಿಗೆ ಉಳಿದಿದೆ. ಆಗಿದ್ದ ವಿದ್ಯುತ್ ಬೇಡಿಕೆಗಿಂತ ಈಗ ಬೇಡಿಕೆ ಹಲವಷ್ಟು ಹೆಚ್ಚಾಗಿದೆ. ವಿದ್ಯುತ್ ಸಂಪರ್ಕಗಳೂ ಹೆಚ್ಚಿವೆ. ಬಳಕೆ ಹೆಚ್ಚಾಗಿದೆ. ಆದರೆ ವಿತರಣಾ ಕೇಂದ್ರದ ಸಾಮರ್ಥ್ಯ ಮಾತ್ರ ಹಾಗೆಯೇ ಉಳಿದಿರುವುದು ಸಮಸ್ಯೆಯಾಗಿದೆ.
ಒಂದು ಗ್ರಾಮದಲ್ಲಿ ಹಿಂದೆ ಕೆಲವೇ ಮನೆಗಳು ಇದ್ದರೆ ಈಗ ನೂರಾರು ಮನೆಗಳು ನಿರ್ಮಾಣವಾಗಿವೆ. ಪಂಪ್ಸೆಟ್ಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಟ್ರಾನ್ಸ್ಫಾರ್ಮರ್ ಸಾಮರ್ಥ್ಯ ಹೆಚ್ಚಳವಾಗದೇ ಇರುವುದರಿಂದ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಗಂಜಿ ಕೇಂದ್ರ ತೆರೆಯುವ ಎಚ್ಚರಿಕೆ:
ಏಪ್ರಿಲ್ 4ರಂದು ಪ್ರತಿಭಟನೆ ಹಾಗೂ ಪಾದಯಾತ್ರೆ ಬಳಿಕವೂ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಗಂಜಿ ಕೇಂದ್ರ ತೆರೆಯುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. 110 ಕೆವಿ ಕೇಂದ್ರ ಸ್ಥಾಪನೆಗಾಗಿ ಒಂದು ತಿಂಗಳ ಗಡುವು ನೀಡಲಾಗುವುದು. ಈ ಅವಧಿಯಲ್ಲೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಜನರನ್ನು ಸೇರಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದರು.
ಜನಹಿತರಂಗದ ಸಂಚಾಲಕ ವಾಟಗೋಡು ಸುರೇಶ್ ಮಾತನಾಡಿ, ಹರಿದ್ರಾವತಿಯಲ್ಲಿ 33 ಕೆವಿ ವಿದ್ಯುತ್ ಕೇಂದ್ರ ಸ್ಥಾಪನೆಗೆ 7 ವರ್ಷ ಹೋರಾಟ ನಡೆಸಲಾಗಿತ್ತು. ಆದರೆ ಹೊಸನಗರಕ್ಕೆ ಬಹುಕಾಲದಿಂದ ಬೇಡಿಕೆ ಇದ್ದ 110 ಕೆವಿ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ಇದರಿಂದ ರೈತರು, ವ್ಯಾಪಾರಿಗಳು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 4ರಂದು ಮಾವಿನಕೊಪ್ಪದಿಂದ ತಾಲೂಕು ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜನಹಿತರಂಗದ ಸಂಚಾಲಕ ವಾಟಗೋಡು ಸುರೇಶ್, ಗುಬ್ಬಿಗಾ ಜಿ.ಎಸ್. ರವಿ, ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
















Leave a Reply