ಹೊಸನಗರ: ತಾಲೂಕಿನ ಮಾವಿನಕೊಪ್ಪ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಹೊಸನಗರ–ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಾಸಕರ ನಿಧಿಯಿಂದ ₹3 ಲಕ್ಷ ದೇಣಿಗೆ ನೀಡಿದ್ದು, ದೇವಾಲಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ದೇವಸ್ಥಾನದ ಶಿಲಾನ್ಯಾಸ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ತಕ್ಷಣಕ್ಕೆ ₹3 ಲಕ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಮುಂದಿನ ಹಂತದಲ್ಲಿ ಸರ್ಕಾರದಿಂದ ₹10 ಲಕ್ಷ ನೆರವು ಒದಗಿಸಲು ಪ್ರಯತ್ನಿಸುವ ಭರವಸೆ ನೀಡಿದರು.
ಗಂಗಾಧರೇಶ್ವರ ಶಿಲಾನ್ಯಾಸ ಕಟ್ಟಡ ಸಮಿತಿಯ ಅಧ್ಯಕ್ಷ ಬೃಂದಾವನ ಪ್ರವೀಣ್ ಮಾತನಾಡಿ, ದೇವಸ್ಥಾನಕ್ಕೆ ಹಕ್ಕುಪತ್ರ ಇಲ್ಲದಿರುವ ಹಿನ್ನೆಲೆಯಲ್ಲಿ ಹಕ್ಕುಪತ್ರ ಮಾಡಿಸಿಕೊಡುವುದಾಗಿಯೂ ಶಾಸಕರು ಭರವಸೆ ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ನಾಗರಾಜ್ ಕಾಮತ್, ಕಾರ್ಯದರ್ಶಿ ಎನ್. ಗಣೇಶ್, ಉಪಾಧ್ಯಕ್ಷರಾದ ರಘು, ಶ್ರೀಧರ, ಮಹೇಂದ್ರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಹೆಚ್. ಶ್ರೀನಿವಾಸ್, ಕೆ.ಜಿ. ನಾಗೇಶ್, ಮಂಜುನಾಥ್ (ಬಾಬು), ಅರ್ಚಕ ಶಂಕರ ಭಟ್ ಹಾಗೂ ದೇವಸ್ಥಾನ ಕಟ್ಟಡ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

















Leave a Reply