ಹೊಸನಗರ: ಸಮಾಜದಲ್ಲಿದ್ದ ಜಾತಿ ಅಸಮಾನತೆ ಹಾಗೂ ಅಸ್ಪೃಶ್ಯತೆಯಂತಹ ಕಟ್ಟುಪಾಡುಗಳನ್ನು ನಿವಾರಿಸಿ, ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿಯನ್ನು ಹೊಸನಗರದ ಆರ್ಯ ಈಡಿಗರ ಸಭಾಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ವೈದ್ಯರತ್ನ ಡಾ. ಜಿ.ಟಿ. ನಾರಾಯಣಪ್ಪ, “12ನೇ ಶತಮಾನದಲ್ಲಿ ಬಸವಣ್ಣ ಜಾತಿ ಪದ್ಧತಿಯ ವಿರುದ್ಧ ಹೋರಾಡಿದಂತೆ, 18–19ನೇ ಶತಮಾನದಲ್ಲಿ ನಾರಾಯಣಗುರು ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತ” ಎಂದು ಹೇಳಿದರು.
“ಇತರ ಜಾತಿಯವರನ್ನು ನಾವು ಹೇಗೆ ನೋಡುತ್ತೇವೆ ಎಂಬ ಆತ್ಮಾವಲೋಕನ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವುದಕ್ಕಿಂತ ಮೊದಲು ನಮ್ಮ ಮನಸ್ಸಿನಲ್ಲಿ ಜಾತಿ ಭಾವನೆ ದೂರವಾಗಬೇಕು” ಎಂದು ಅವರು ಕರೆ ನೀಡಿದರು.

ಮುಖ್ಯ ಭಾಷಣ ಮಾಡಿದ ಬಿ.ಜಿ. ನಾಗರಾಜ್, ಇಂದಿನ ವಿದ್ಯಾವಂತರೂ ಮೂಢನಂಬಿಕೆಗಳ ಹಿಂದೆ ಹೋಗುತ್ತಿರುವುದು ಕಳವಳಕಾರಿ ಎಂದು ಹೇಳಿ, ಸಮಾಜದ ಪ್ರಭಾವಿ ನಾಯಕರು ಹಾಗೂ ಸಂಘಟನೆಗಳು ಒಗ್ಗಟ್ಟಿನಿಂದ ಸಮಾನತೆಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡಿ ರಾಮಚಂದ್ರ ವಹಿಸಿದ್ದರು. ವೇದಿಕೆಯಲ್ಲಿ ಈರಗೆ ಉಮೇಶ್, ಬಂಡಿ ಶ್ವೇತಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ., ಬಂಡಿ ಸೋಮಶೇಖರ್, ಗೀತಾ ಲಿಂಗಪ್ಪ, ತ್ರಿಣಿವೇಣಿ ಯೋಗೇಂದ್ರ, ಮುರುಳೀಧರ, ಎಂ.ಪಿ. ಸುರೇಶ್, ಟೀಕಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 70 ವಿದ್ಯಾರ್ಥಿಗಳು ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
















Leave a Reply