
ರಿಪ್ಪನ್ಪೇಟೆ : ಉತ್ತಮ ಗುಣಮಟ್ಟದ ಭತ್ತದ ಬೀಜಗಳನ್ನು ಆಯ್ಕೆ ಮಾಡಿಕೊಂಡು ಸೂಕ್ತ ಬೀಜೋಪಚಾರ ನಡೆಸಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಹುಂಚ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್ ಹೇಳಿದರು.
ಸಮೀಪದ ಕೋಡೂರು ಗ್ರಾಮದಲ್ಲಿ ಆಯೋಜಿಸಿದ್ದ ಸುರಕ್ಷಿತ ಕೀಟನಾಶಕಗಳ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಬಿತ್ತನೆಗೆ ಮೊದಲು ಉಪ್ಪುನೀರಿನ ದ್ರಾವಣದಲ್ಲಿ ಬೀಜಗಳನ್ನು ಪರೀಕ್ಷಿಸಿ, ಗುಣಮಟ್ಟದ ಹಾಗೂ ಆರೋಗ್ಯಕರ ಬೀಜಗಳನ್ನು ಮಾತ್ರ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಬೀಜಗಳಿಂದ ಹರಡುವ ರೋಗಗಳು ಹಾಗೂ ಕೀಟಗಳ ಹಾವಳಿಯನ್ನು ತಡೆಗಟ್ಟಲು ಸಾವಯವ ಜೀವಾಣುಗಳು ಮತ್ತು ಶಿಫಾರಸು ಮಾಡಿದ ಔಷಧಿಗಳ ಮೂಲಕ ಬೀಜೋಪಚಾರ ಮಾಡುವುದು ಅಗತ್ಯವಾಗಿದೆ. ಕೀಟನಾಶಕಗಳ ಬಳಕೆಯ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರೈತರಿಗೆ ವಿವರವಾದ ಮಾಹಿತಿ ನೀಡಲಾಯಿತು.
ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ಕುಸುಗುಂಡಿ ಮಾತನಾಡಿ, ಭತ್ತದ ಕೃಷಿಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ, ಮ್ಯಾಟ್ ನರ್ಸರಿ ತಯಾರಿಕೆ ಹಾಗೂ ನಾಟಿ ಯಂತ್ರದ ಬಳಕೆಯ ಕುರಿತು ರೈತರಿಗೆ ತಾಂತ್ರಿಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೊಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್,ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ಕೋಡೂರು ವಲಯ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ, ಮೇಲ್ವಿಚಾರಕ ಮಂಜುನಾಥ್, ಕೃಷಿ ಸಖಿಯರಾದ ಮಾಲತಿ, ಸಂತೋಷ್, ಸಂಗೀತಾ ಹಾಗೂ ಗ್ರಾಮಸ್ಥರು ಮತ್ತು ರೈತರು ಭಾಗವಹಿಸಿದ್ದರು.

















Leave a Reply