ರಿಪ್ಪನ್ಪೇಟೆ: ಮಲೆನಾಡಿನಾದ್ಯಂತ ಭಕ್ತಿಭಾವದ ವಾತಾವರಣದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ರಿಪ್ಪನ್ಪೇಟೆ ಪಟ್ಟಣದ ಕಿರು ಮಂತ್ರಾಲಯ, ಜಿ.ಎಸ್.ಬಿ ಸಮಾಜ, ಸಮೀಪದ ಗರ್ತಿಕೆರೆ ಹಾಗೂ ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಗುರುರಾಯರ ದರ್ಶನ ಪಡೆದು ಪುಣ್ಯಾರಾಧನೆಯಲ್ಲಿ ಭಾಗಿಯಾದರು.

ಪಟ್ಟಣದ ಪ್ರಸಿದ್ಧ ಕಿರು ಮಂತ್ರಾಲಯದಲ್ಲಿ ಪ್ರಾತಃಕಾಲದಿಂದಲೇ ವಿಶೇಷ ಪೂಜೆ, ಪುಣ್ಯಾರಾಧನೆ, ಪಂಚಾಮೃತ ಮಹಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ ಭಜನಾ ಕಾರ್ಯಕ್ರಮ ಜರುಗಿತು . ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ರಾಯರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ ತೀರ್ಥ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.


ಪಟ್ಟಣದ ಜಿ.ಎಸ್.ಬಿ ಸಮಾಜದಲ್ಲಿಯೂ ಆರಾಧನಾ ಮಹೋತ್ಸವ ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು. ವಿಶೇಷ ಪೂಜೆ, ಗುರುಸ್ತೋತ್ರ ಪಾರಾಯಣ ಹಾಗೂ ಮಂಗಳಾರತಿ, ಭಜನಾ ಕಾರ್ಯಕ್ರಮ ನೆರವೇರಿದವು. ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮೀಪದ ಗರ್ತಿಕೆರೆ ಶ್ರೀ ರಾಘವೇಂದ್ರ ಮಠದಲ್ಲಿ 355ನೇ ಆರಾಧನೆ ವಿಜೃಂಭಣೆಯಿಂದ ಆಚರಿಸಲಾಯಿತು. ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಪೂಜೆ, ಪುಣ್ಯಾರಾಧನೆ ಮತ್ತು ತೀರ್ಥ ಪ್ರಸಾದ ವಿತರಣೆಯಲ್ಲಿ ನೂರಾರು ಭಕ್ತರು ಗರ್ತಿಕೆರೆ, ಹೆದ್ದಾರಿಪುರ, ಹುಂಚ, ಸೊನಲೆ, ಕೋಣಂದೂರು ಭಾಗದ ಭಕ್ತರು ಭಾಗವಹಿಸಿದರು.

ಅದೇ ರೀತಿ ಹರತಾಳು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೂ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುರಾಯರ ಆಶೀರ್ವಾದ ಪಡೆದರು.


















Leave a Reply