ರಿಪ್ಪನ್ಪೇಟೆ: ರಸ್ತೆ ದುರಸ್ತಿಗೆ ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ, ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಳ್ಳಿ, ಕರಡಿಗ, ಬೆಳಕೋಡು ಹಾಗೂ ಕೊಳವಳ್ಳಿ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಮುಖ ಸಂಪರ್ಕ ರಸ್ತೆ ಮಳೆಗಾಲದಲ್ಲಿ 3-4 ಕೀಮಿ ಅಷ್ಟು ಸಂಪೂರ್ಣ ಕೆಸರುಗದ್ದೆಯಂತಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಪ್ರತಿಭಟನೆ ನಡೆಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಸಮಸ್ಯೆಗೆ ಕೊನೆಯೇ ಇಲ್ಲ; ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಅಸಮಾಧಾನ
ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ರಸ್ತೆಯನ್ನು ಹಲವು ವರ್ಷಗಳಿಂದ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರಿಗೂ ಮನವಿ ಸಲ್ಲಿಸಿ, ರಸ್ತೆ ಪರಿಶೀಲನೆಗೆ ಕರೆದುಕೊಂಡು ಬಂದಿದ್ದರೂ, ಪ್ರತಿ ಬಾರಿ ‘ಅನುದಾನ ಬರಲಿ, ರಸ್ತೆ ಮಾಡೋಣ’ ಎಂಬ ಹಾರಿಕೆ ಉತ್ತರವೇ ಸಿಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಗ್ರಾಮಸ್ಥರೊಬ್ಬರು ; ನಮಗೆ ವಿಷ ಕೊಟ್ಟು ಬಿಡಿ ನಾವು ನಿಮಗೆ ಹೇಳೋದು – ಕೇಳೋದು ಎಲ್ಲಾ ಮುಗಿಯಲಿ ಎಂದು ಅಸಮಾಧಾನ ಹೊರಹಾಕಿದರು.
ಪಿಎಂ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗೆ ಅನುದಾನ ಬಿಡುಗಡೆಯಾಗಿತ್ತು ಎನ್ನಲಾಗುತ್ತಿದ್ದರೂ, ಕಾಮಗಾರಿ ಏಕೆ ಅನುಷ್ಠಾನಗೊಂಡಿಲ್ಲ? ಸ್ಥಳೀಯ ಮುಖಂಡರು ಏಕೆ ಶಾಸಕರು ಹಾಗೂ ಸಂಸದರ ಗಮನಕ್ಕೆ ಈ ಸಮಸ್ಯೆಯನ್ನು ಸಮರ್ಪಕವಾಗಿ ತಂದಿಲ್ಲ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ರಸ್ತೆಯಲ್ಲೇ ಭತ್ತ ನಾಟಿ, ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ರಸ್ತೆಯ ದುಸ್ಥಿತಿಯನ್ನು ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತರಲು ಗ್ರಾಮಸ್ಥರು ಕೆಸರು ತುಂಬಿದ ರಸ್ತೆಯಲ್ಲೇ ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರಸ್ತೆ ದುರಸ್ತಿಯಾಗದೆ ಇದೇ ಪರಿಸ್ಥಿತಿ ಮುಂದುವರಿದರೆ ಜನರ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದರು.
ಅಷ್ಟೇ ಅಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟವನ್ನು ಬಿಂಬಿಸಲು ರೋಗಿಯನ್ನು ಮರದ ಕಂಬದಲ್ಲಿ ಹೊತ್ತೊಯ್ಯುವ ಅಣುಕು ಪ್ರದರ್ಶನ ನಡೆಸಿದರು.

ಗರ್ಭಿಣಿಯರು, ಮಕ್ಕಳು, ರೋಗಿಗಳಿಗೂ ಸಂಕಷ್ಟ
“ಯಾವುದೇ ಗ್ರಾಮ ಅಭಿವೃದ್ಧಿಯಾಗಬೇಕಾದರೆ ಮೊದಲು ಆ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಇರಬೇಕು. ಆದರೆ ನಮ್ಮ ಗ್ರಾಮಗಳ ಪರಿಸ್ಥಿತಿ ಹಾಗಿಲ್ಲ. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು, ಮಕ್ಕಳು ಶಾಲೆಗೆ ತೆರಳಲು ಹಾಗೂ ಸಾರ್ವಜನಿಕರು ಸಂಚರಿಸಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.

ರಸ್ತೆ ದುರಸ್ತಿ ಮಾಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಪಕ್ಷಾತೀತವಾಗಿ ಒಗ್ಗೂಡಿದ ಗ್ರಾಮಸ್ಥರು, ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನೂ ನೀಡಿದರು.
ಈ ಸಂಧರ್ಭದಲ್ಲಿ ಶಿವಪ್ಪ ಸಂಪಳ್ಳಿ, ಶೇಖರಪ್ಪ ಕಣಬಂದೂರು, ಜಯಪ್ರಕಾಶ್, ಗಣೇಶ, ಕರಡಿಗ ರಾಮು, ಗಣೇಶ್ ಸಂಪಳ್ಳಿ, ಜಯಪ್ರಕಾಶ್ ಸಂಪಳ್ಳಿ, ಪ್ರಕಾಶ್ ಕರಡಿಗ, ಮಂಜುನಾಥ್ ಬೆಳಕೋಡು, ಲಕ್ಕಪ್ಪ, ಲಿಂಗಪ್ಪ, ಉಮೇಶ್, ಶ್ರೇಯಸ್, ನಾಗರಾಜ, ಗಂಗಾಧರ, ಜಯಪ್ರಕಾಶ್, ಪ್ರಕಾಶ್, ರಾಘು, ತಿಮ್ಮನಾಯ್ಕ, ಯೋಗೇಂದ್ರ, ವಾಸು, ಮಂಜುನಾಥ, ಭೀಮರಾಜ್, ಗುಂಡಪ್ಪ, ಲೋಕಪ್ಪ, ಪುನೀತ್, ಮಧು, ಹರೀಶ್ ಸೇರಿದಂತೆ ಕರಡಿಗ, ಬೆಳಕೋಡು, ಕೊಳವಳ್ಳಿ ಹಾಗೂ ಸಂಪಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
















Leave a Reply