ಸಾಗರ: ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಮಾಂಸ ಸೇವಿಸಿರುವ ಪ್ರಕರಣವನ್ನು ಅರಣ್ಯ ಇಲಾಖೆ ಭೇದಿಸಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಆರು ಮಂದಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರಡಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 2ರಂದು ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಗಲ್ ವನ್ಯಜೀವಿ ವಿಭಾಗದ ಅಧಿಕಾರಿಗಳು ನಾಗವಳ್ಳಿ ಗ್ರಾಮದ ಸರ್ವೆ ನಂ.72ರಲ್ಲಿರುವ ಜಮೀನಿನ ಮೇಲೆ ದಾಳಿ ನಡೆಸಿದರು. ಈ ವೇಳೆ ಎರಡು ಗಂಡು ಚುಕ್ಕೆ ಜಿಂಕೆಗಳನ್ನು ಅಕ್ರಮವಾಗಿ ವಿದ್ಯುತ್ ಹರಿಸಿ ಕೊಂದಿರುವುದು ಪತ್ತೆಯಾಯಿತು.
ಆರೋಪಿಗಳು ಮಾಂಸದ ಒಂದು ಭಾಗವನ್ನು ಬೇಯಿಸಿ ಸೇವಿಸಲು ಸಿದ್ಧಪಡಿಸಿಕೊಂಡಿದ್ದು, ಉಳಿದ ಕಳೇಬರವನ್ನು ಮಣ್ಣಿನಲ್ಲಿ ಹೂತು ಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರನ್ನು ಬಾನು, ಶಿವು ಹಾಗೂ ಮಹೇಶ್ ಎಂದು ಗುರುತಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

















Leave a Reply