ಶಿವಮೊಗ್ಗ: ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮೀಯ ಶೈಲಿಯಲ್ಲಿ ಪೊಲೀಸರಿಂದ ಬೆನ್ನಟ್ಟಿಸಿಕೊಂಡು ಅರಣ್ಯಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಅಬ್ದುಲ್ ಮಜೀದ್ (35) ಎಂದು ಗುರುತಿಸಲಾಗಿದ್ದು, ಆತ ಉಡುಪಿ ಮೂಲದವನಾಗಿದ್ದಾನೆ. ಟೈಗರ್ ಗ್ಯಾಂಗ್ನ ಸಕ್ರಿಯ ಸದಸ್ಯನಾಗಿರುವ ಈತ ಆಗುಂಬೆ ಭಾಗದಲ್ಲಿ ಕಾರಿನ ಮೂಲಕ ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂಬ ಅನೇಕ ಆರೋಪಗಳಿವೆ.

ಜುಲೈ 30ರಂದು ಆರೋಪಿಯ ಚಲನವಲನದ ಕುರಿತು ಖಚಿತ ಮಾಹಿತಿ ಪಡೆದ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಹಾಗೂ ಅವರ ತಂಡ ಹೆಬ್ರಿಯಿಂದಲೇ ಕಾರನ್ನು ಬೆನ್ನಟ್ಟಿತ್ತು. ಚೇಸಿಂಗ್ ವೇಳೆ ಆರೋಪಿ ಆಗುಂಬೆ, ಕಲ್ಮನೆ, ಕನ್ನಂಗಿ, ಹಣಗೆರೆಕಟ್ಟೆ, ಆಯನೂರು ಮಾರ್ಗವಾಗಿ ರಿಪ್ಪನ್ಪೇಟೆಯವರೆಗೆ ವೇಗವಾಗಿ ಕಾರು ಚಲಾಯಿಸಿದ್ದ.
ರಿಪ್ಪನ್ಪೇಟೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಮನಿಸಿದ ಆರೋಪಿ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಬೆನವಳ್ಳಿ ಸಮೀಪಕ್ಕೆ ತೆರಳಿದ್ದ. ಬಳಿಕ ಕಾರನ್ನು ಅಲ್ಲೇ ಬಿಟ್ಟು ದಟ್ಟ ಅರಣ್ಯದೊಳಗೆ ನುಗ್ಗಿ ಪರಾರಿಯಾಗಿದ್ದ.
ಆರೋಪಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಆಗುಂಬೆ ಪೊಲೀಸರು, ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರ ಜಾಲದ ನೆರವಿನಿಂದ ಅಬ್ದುಲ್ ಮಜೀದ್ನನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳು ಹಾಗೂ ಕಳ್ಳಸಾಗಣೆ ಜಾಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

















Leave a Reply