
ಹೊಸನಗರ: ತಾಲ್ಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮಸ್ಥರ ಓಡಾಟಕ್ಕೆ ತೊಂದರೆ ಉಂಟಾದ ಹಿನ್ನೆಲೆ ಗ್ರಾಮಸ್ಥರು ಹೋರಾಟ ನಡೆಸಿದ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಭರತ್ರಾಜ್ ಅವರು ಸಮಸ್ಯೆಗೆ ತಕ್ಷಣ ಸ್ಪಂದಿಸಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಗಂಗನಕೊಪ್ಪ ಗ್ರಾಮದಲ್ಲಿ ನೂರಾರು ಮನೆಗಳಿದ್ದು, ಕೋಟೆಕಾನು, ವರಕೋಡು, ಗಂಗನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಇದೇ ರಸ್ತೆ ಮೂಲಕ ಹೊಸನಗರ ಪಟ್ಟಣಕ್ಕೆ ಸಂಚಾರ ನಡೆಸುತ್ತಿದ್ದರು. ಅಲ್ಲದೆ ಶಾಲಾ ಮಕ್ಕಳು, ಎಸ್.ಸಿ-ಎಸ್.ಟಿ ಸಮುದಾಯದ ಜನರು ಹಾಗೂ ರೈತರು ಈ ಮಾರ್ಗವನ್ನೇ ಅವಲಂಬಿಸಿದ್ದರು.
ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ಬಳಿಕ ಗಂಗನಕೊಪ್ಪ ಗ್ರಾಮದ ರಸ್ತೆ ಭಾಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಮಸ್ಥರ ಓಡಾಟಕ್ಕೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಹೈವೇ ರಸ್ತೆ ಗ್ರಾಮದ ಮಧ್ಯೆ ಹಾದು ಹೋಗುತ್ತಿರುವುದರಿಂದ ನೂರಾರು ಮನೆಗಳು ಅತಂತ್ರ ಸ್ಥಿತಿಗೆ ತಲುಪಿದ್ದು, ಬ್ಯಾನಗಳಲೆ ಹಾಗೂ ಹೊಸನಗರ ಸಂಪರ್ಕಕ್ಕೂ ಸಮಸ್ಯೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆ ಗ್ರಾಮಸ್ಥರು ರಸ್ತೆಯ ಮಧ್ಯೆ ನಿಂತು ಪ್ರತಿಭಟನೆ ನಡೆಸಿದರು. ಮಾಹಿತಿ ತಿಳಿದು ತಹಶೀಲ್ದಾರ್ ಭರತ್ರಾಜ್, ಹೈವೇ ಇಂಜಿನಿಯರ್ಗಳು, ರೆವಿನ್ಯೂ ಇನ್ಸ್ಪೆಕ್ಟರ್ ಅಂಜನೇಯ, ಗ್ರಾಮ ಆಡಳಿತಾಧಿಕಾರಿ ಲೋಹಿತ್ ಹಾಗೂ ಗಣೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಈ ವೇಳೆ ತಹಶೀಲ್ದಾರ್ ಭರತ್ರಾಜ್ ಅವರು ಹೈವೇ ಇಂಜಿನಿಯರ್ಗಳಿಗೆ ಈಗಾಗಲೇ ಜನರು ಬಳಸುತ್ತಿರುವ ರಸ್ತೆಗೆ ಯಾವುದೇ ತೊಂದರೆ ನೀಡಬಾರದು ಎಂದು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಸ್ಥರ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವವರೆಗೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ತಹಶೀಲ್ದಾರ್ ಸೂಚನೆ ಪಾಲಿಸುವುದಾಗಿ ಹೈವೇ ಇಂಜಿನಿಯರ್ಗಳು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದು ಆಡಳಿತದ ಭರವಸೆಗೆ ಮನ್ನಣೆ ನೀಡಿದರು.

















Leave a Reply