ಹೊಸನಗರ: ಯಾವುದೇ ಸಂಘ-ಸಂಸ್ಥೆಗಳಿರಲಿ ಅಥವಾ ಸರ್ಕಾರಗಳೇ ಆಗಿರಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುವುದರ ಜೊತೆಗೆ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೊಸನಗರ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಹೇಳಿದರು.
ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಪ್ರಶಸ್ತಿ ಪತ್ರ, ನಗದು ಬಹುಮಾನ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಿ ಮಾತನಾಡಿದರು.

ನಮ್ಮ ಸಂಸ್ಥೆ ಸದಸ್ಯರ ಮಕ್ಕಳನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯವೇ ನಮ್ಮ ಸಂಸ್ಥೆಯ ಗುರಿಯಾಗಿದ್ದು, ಸಂಘದ ಸದಸ್ಯರಿಗೆ ವಿವಿಧ ಸೌಲಭ್ಯಗಳಾದ ಅಡಿಕೆ ಆಧಾರಿತ ಸಾಲ, ಕಟಾವು ಸಾಲ, ಕೊಳೆರೋಗದ ಸಾಲ, ನಿವೃತ್ತಿ ಹಾಗೂ ಠೇವಣಿ ಯೋಜನೆಗಳು, ಗುಂಪು ವಿಮಾ ಯೋಜನೆ, ವೈದ್ಯಕೀಯ ಸೌಲಭ್ಯ ಹಾಗೂ ಮರಣೋತ್ತರ ನಿಧಿ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಧರ್ಮೇಂದ್ರ, ಶಾಖಾ ವ್ಯವಸ್ಥಾಪಕರಾದ ಗಣಪತಿ ಎಸ್.ಕೆ., ಕಿರಿಯ ಸಹಾಯಕರಾದ ಮಧುಸೂದನ್, ವಿದ್ಯಾಶ್ರೀ, ದಿವ್ಯಾ, ಲೀಲಾವತಿ, ದಯಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
















Leave a Reply