ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ಹೊಸನಗರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಪ್ರಗತಿಗೆ ಪೂರಕವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ವಕೀಲ ಮೋಹನ ಜಿ ಶೆಟ್ಟಿ ಹೇಳಿದರು.
ಇಲ್ಲಿನ ಈಡಿಗರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಮೂವತ್ತು ವರ್ಷಗಳ ಹಿಂದೆ ಜೀವನ ನಡೆಸುವುದೇ ಕಷ್ಟಕರವಾದ ಸಂದರ್ಭದಲ್ಲಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಕುಟುಂಬ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮನೆ-ಮನೆಗೆ ಕೆಲಸ ಹಾಗೂ ಉದ್ಯೋಗ ನೀಡುತ್ತಾ ಬಂದಿರುವುದರಿಂದ ಸಮಾಜದಲ್ಲಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ ಎಂದರು.
ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ, ಜ್ಞಾನವಿಕಾಸ ಕೇಂದ್ರದ ಉದ್ದೇಶಗಳನ್ನು ವಿವರಿಸಿದರು. ಡಾ.ಸುಚಿತ್ರ. ಮಹಿಳೆಯರ ಒತ್ತಡದ ಬದುಕಿನ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದರ ಮಹತ್ವದ ಕುರಿತು ಮಾತನಾಡಿದರು.
ಪ್ರಾದೇಶಿಕ ವ್ಯಾಪ್ತಿಯ ಯೋಜನಾಧಿಕಾರಿ ರತ್ನ, ಪ್ರಮುಖರಾದ ಶಾರದಾ, ಸುಮವತಿ ಮತ್ತಿತರರು ಇದ್ದರು. ತಾಲೂಕಿನ ಯೋಜನಾಧಿಕಾರಿ ಪ್ರದೀಪ್ ಆರ್ ಪ್ರಾಸ್ತಾವಿಕ ಮಾತನಾಡಿದರು. ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕರಾವಳಿ ಭಾಗದ ಕಲೆಗಳು, ಯಕ್ಷಗಾನ ಪ್ರದರ್ಶನ, ರಂಗೋಲಿ ಸ್ಪರ್ಧೆ. ಭತ್ತದ ತೆನೆ, ಹಾಳೆ ತಟ್ಟೆ ಇದರಿಂದ ತಯಾರಿಸಿದ ಕರಕುಶಲ ವಸ್ತು ಪ್ರದರ್ಶನ, ಪ್ಲಾಸ್ಟಿಕ್ ರಹಿತ ಪುಷ್ಪಗುಚ್ಚ ತಯಾರಿಕೆ ಮೊದಲಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾಂತಕುಮಾರಿ, ಸೇವಾ ಪ್ರತಿನಿಧಿಗಳು ಕೇಂದ್ರದ ಸದಸ್ಯರು ಕಾರ್ಯಕ್ರಮ ನಿರ್ವಹಿಸಿದರು.












Leave a Reply