ಶ್ರೀ ಕಲ್ಯಾಣೇಶ್ವರ ದೇವರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಹೊಸನಗರ : ಒಂದು ಹಳ್ಳಿ ಅಭಿವೃದ್ಧಿಯಾಗಬೇಕು ಎಂದರೆ ಅ ಊರಿನಲ್ಲಿ ಮೊದಲ ವಿದ್ಯಾಲಯ, ದೇವಾಲಯ, ಔಷದಾಲಯಗಳು ಸುಸ್ಥಿರವಾಗಿ ಇದ್ದರೆ ಮಾತ್ರ ಆ ಹಳ್ಳಿ ಮಾದರಿ ಎನಿಸಿಕೊಳ್ಳುತ್ತದೆ. ಈ ಎಲ್ಲಾ ಅಭಿವೃದ್ಧಿಯ ಹಿಂದೆ ಊರಿನವರ ಶ್ರಮ, ಒಗ್ಗಟ್ಟು ಇರಲೇಬೇಕು. ಹಾಗೆಯೇ ದೇವಸ್ಥಾನಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ವಾನ್ ಲಕ್ಶ್ಮೀನಾರಾಯಣ ಹೇಳಿದರು.
ವಾರಂಬಳ್ಳಿಯ ಕಲ್ಯಾಣೇಶ್ವರ ದೇವಸ್ಥಾನದಲ್ಲಿ ನಡೆದ ಕಲ್ಯಾಣೇಶ್ವರ ದೇವರ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದರು.
ದೇವಸ್ಥಾನ ಅಧ್ಯಕ್ಷ ಕೃಷ್ಣಮೂರ್ತಿ ಮಠದಜೆಡ್ಡು ಮಾತನಾಡಿ ಒಂದು ದೇವಸ್ಥಾನದ ನಿರ್ಮಾಣದ ಹಿಂದೆ ಪ್ರತಿಯೊಬ್ಬರ ಶ್ರಮ, ತ್ಯಾಗವಿರುತ್ತದೆ. ದೇವಸ್ಥಾನಗಳು ಚೆನ್ನಾಗಿದ್ದರೆ ಆ ಹಳ್ಳಿಯೂ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮೊದಲ ವರ್ಷದ ‘ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು. ತ್ರಿಣಿವೆಯ ಆಯುಷ್ ವೈದ್ಯಾಧಿಕಾರಿ ಡಾ| ಪ್ರತಿಮಾ ಮತ್ತು ಗೋ ರಕ್ಷಕ ರಾಘವೇಂದ್ರ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಹಾಗೂ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸುಮಾರು 31 ಜನ ರಕ್ತದಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಗೌರವಾದ್ಯಕ್ಷ ಶಂಕರಪ್ಪ ಗೌಡ, ಗ್ರಾಮಪಂಚಾಯ್ತಿ ಸದಸ್ಯೆ ಹೂವಮ್ಮ ರಾಮಚಂದ್ರ, ನಾಗಪ್ಪ, ಶ್ರೀನಿವಾಸ್, ಸತೀಶ್, ರಾಘವೇಂದ್ರ ಬಲಗ, ನಾಗರಾಜ್ ಜೋಯಿಸ್, ವಿನಾಯಕ ಪ್ರಭು ಮುಂತಾದವರು ಉಪಸ್ಥಿತರಿದ್ದರು.












Leave a Reply