
ಹೊಂಬುಜ ( ರಿಪ್ಪನಪೇಟೆ ): ಜೈನ ಪರಂಪರೆಯ ಪ್ರಮುಖ ಆಚರಣೆಗಳಲ್ಲಿ ಒಂದಾದ ಶ್ರುತ ಪಂಚಮಿ ಪರ್ವವನ್ನು ಹೊಂಬುಜದ ಶ್ರೀ ಜೈನ ಮಠದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಜೈನ ಧರ್ಮದ ಉಪದೇಶಗಳು ಮತ್ತು ಸಿದ್ಧಾಂತಗಳು ಜೀವನಕ್ಕೆ ದಾರಿದೀಪವಾಗಿದ್ದು, ಜ್ಞಾನವಂತರಾಗಿ ಸಮ್ಯಕ್ತ್ವ ಗುಣವನ್ನು ಪಡೆಯಲು ಜಿನವಾಣಿ ಸತ್ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಬೆಳಿಗ್ಗೆ ಶ್ರುತಸ್ಕಂದ, ಶ್ರೀ ಜಿನವಾಣಿ ಮಾತೆ ಸರಸ್ವತಿ ದೇವಿಯ ಪೂಜೆ ಹಾಗೂ ಆದಿನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆದವು.
ಅನುಗ್ರಹ ಪ್ರವಚನದಲ್ಲಿ ವ್ರತಧಾರಿ ಬಾಲಕ-ಬಾಲಕಿಯರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, ಜೈನ ಮತದ ಸಿದ್ಧಾಂತಗಳು ಸರ್ವಕಾಲಿಕವಾಗಿದ್ದು ಜೀವನಕ್ಕೆ ದೀಪ್ತಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 29 ವ್ರತಧಾರಿಗಳಿಗೆ ವ್ರತ ಸ್ವೀಕಾರ ವಿಧಿ ನೆರವೇರಿಸಲಾಯಿತು. ಅಲ್ಲದೆ 13 ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವದಿಸಲಾಯಿತು.
ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಹಾಗೂ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆದವು. ಈ ವೇಳೆ ಊರು-ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಶ್ರೀ ಪದ್ಮಾವತಿ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
















Leave a Reply