ವಿಶೇಷ ವರದಿ|ನಾಗರಾಜ್.ಆರ್
ಹೊಸನಗರ: ವಯೋಸಹಜ ಕಾಯಿಲೆಯಿಂದಾಗಿ ಎದ್ದು ಓಡಾಡಲೂ ಸಾಧ್ಯವಾಗದ 68 ವರ್ಷದ ವೃದ್ಧೆಯೊಬ್ಬರು ಕಳೆದ ನಾಲ್ಕು ತಿಂಗಳಿಂದ ಪಡಿತರ ಅಕ್ಕಿಗಾಗಿ ಪರದಾಡುತ್ತಿರುವ ಘಟನೆ ಹೊಸನಗರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಹೊಸನಗರ ಪಟ್ಟಣದ ಜೆ.ಸಿ.ಎಂ ರಸ್ತೆಯ ನಿವಾಸಿ ಗೌರಮ್ಮ ಅವರು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಬೆನ್ನುಮೂಳೆ ಸವೆದು, ಇದೀಗ ಸ್ವತಂತ್ರವಾಗಿ ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಈ ಹಿಂದೆ ಹೊಸನಗರದ ಕಳೂರು ನ್ಯಾಯಬೆಲೆ ಅಂಗಡಿಗೆ ತೆರಳಿ, ಇತರರ ಸಹಾಯದಿಂದ ಪಡಿತರ ಅಕ್ಕಿ ಪಡೆಯುತ್ತಿದ್ದರು. ಆದರೆ ಇದೀಗ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿರುವುದರಿಂದ, ಕಳೆದ ನಾಲ್ಕು ತಿಂಗಳಿಂದ ಪಡಿತರ ಅಕ್ಕಿ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
E–KYCಗಾಗಿ ಓಡಾಡಲು ಅಸಾಧ್ಯ :
ಪಡಿತರ ಅಕ್ಕಿ ಪಡೆಯಲು E-KYC ಹಾಗೂ ಬೆರಳಚ್ಚು ನೀಡುವ ಅಗತ್ಯ ಎದುರಾಗಿರುವುದು 68ರ ವೃದ್ಧೆಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.
ಮೊದಲೇ ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಗೌರಮ್ಮ ಅವರು KYC ಹಾಗೂ ಬೆರಳಚ್ಚಿಗಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಪಡೆಯುವುದು ಹೇಗೆ ಎಂಬುದು ಪ್ರಶ್ನೆ ಇದೀಗ ಅವರಿಗೆ ಎದುರಾಗಿದೆ.
ಮಾನವೀಯ ನೆರವಿಗೆ ಮನವಿ: ಇಂತಹ ವಯೋವೃದ್ಧರು ಹಾಗೂ ಓಡಾಡಲು ಸಾಧ್ಯವಾಗದ ಕುಟುಂಬಗಳನ್ನು ನ್ಯಾಯಬೆಲೆ ಅಂಗಡಿಗಳುಗುರುತಿಸಿ, ಅವರ ಪಟ್ಟಿಯನ್ನು ಆಹಾರ ಇಲಾಖೆ ಹಾಗೂ ತಾಲೂಕು ಆಡಳಿತದ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು.
ಅಂತಹ ಕುಟುಂಬಗಳಿಗೆ ಪಡಿತರ ಅಕ್ಕಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದರೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಿಜವಾದ ನೆರವು ದೊರೆಯಲಿದೆ ಎಂಬುದು ಸಾರ್ವಜನಿಕರ ಅಭಿಮತ.
ಸಂಬಂಧಪಟ್ಟ ಇಲಾಖೆ ಹಾಗೂ ತಾಲೂಕು ಆಡಳಿತ ಈ ಸಮಸ್ಯೆಯನ್ನು ಪರಿಗಣಿಸಿ, ಗೌರಮ್ಮ ಅವರಂತಹ ಅನೇಕ ಅಸಹಾಯಕ ವೃದ್ಧರಿಗೆ ಮಾನವೀಯತೆಯ ನೆರವಿನ ಹಸ್ತ ಚಾಚಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

















Leave a Reply