ಶೈಕ್ಷಣಿಕ ಸಾಧನೆಯಿಂದಲೇ ಗಂಗಾಮತಸ್ಥರ ಸಮಾಜದ ಪ್ರಗತಿ ಸಾಧ್ಯ|ತಾಲೂಕು ಗಂಗಾಮತಸ್ಥರ ಸಮಾಜದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

1 20260729 201953 0000 ಶೈಕ್ಷಣಿಕ ಸಾಧನೆಯಿಂದಲೇ ಗಂಗಾಮತಸ್ಥರ ಸಮಾಜದ ಪ್ರಗತಿ ಸಾಧ್ಯ|ತಾಲೂಕು ಗಂಗಾಮತಸ್ಥರ ಸಮಾಜದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Spread the love

ರಿಪ್ಪನ್‌ಪೇಟೆ: ಗಂಗಾಮತಸ್ಥರ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬಂದರೆ ಇಡೀ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಕೋಡೂರು ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.

  ಕೋಡೂರು ಜೇನುಕಲ್ಲಮ್ಮ ದೇವಸ್ಥಾನದ ಸಭಾಭವನದಲ್ಲಿ ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ಅನ್ವೇಷಣೆಗಳೊಂದಿಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಏಕಾಗ್ರತೆ ಮತ್ತು ನಿರಂತರ ಅಭ್ಯಾಸದ ಮೂಲಕ ಗುರಿ ಸಾಧಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯೇ ಸಮಾಜದ ಸಮಗ್ರ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಚಿದಂಬರ ಹೆಚ್.ಬಿ. ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ಸಾಧನೆಗಳ ಮೂಲಕ ಪೋಷಕರು, ಗುರುಗಳು ಮತ್ತು ಸಮಾಜಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗಂಗಾಮತಸ್ಥರ ಸಮಾಜದ ಜಿಲ್ಲಾಧ್ಯಕ್ಷ ಡಿ.ಬಿ. ಕೆಂಚಪ್ಪ, ಚಂದ್ರಶೇಖರ್, ಸತ್ಯನಾರಾಯಣ ಎಂ.ಹೆಚ್., ಉಮೇಶ್ ಕಾಳೇಶ್ವರ, ಗಂಗಾಧರ್ ಕೆ., ಬೆನಕಪ್ಪ, ಮೇಘರಾಜ್, ಸರಸ್ವತಿ ಗಣಪತಿ, ನೀಲಾವತಿ ನಾಗರಾಜ್, ದಿನೇಶ್ ಕುಮಾರ್ ಜಿ., ಗಣಪತಿ ಡಿ.ಕೆ., ಪಾಂಡುರಂಗ ಎಂ.ಹೆಚ್., ಪ್ರಕಾಶ್ ಕೆ.ಡಿ., ಶಿವಾನಂದ, ಲೋಕೇಶ್, ಪುಟ್ಟಸ್ವಾಮಿ, ಧರ್ಮರಾಜ್, ಮಂಜುನಾಥ್, ಈಶ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದಿನೇಶ್ ಕುಮಾರ್ ಜಿ. ಸ್ವಾಗತಿಸಿದರು. ಲೋಹಿತ್ ಕುಮಾರ್ ವಂದಿಸಿದರು. ಕುಮಾರಿ ವಿದ್ಯಾ ಹಾಗೂ ಭುವನ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *