ರಿಪ್ಪನ್ಪೇಟೆ: ನರೇಗಾ ಯೋಜನೆಯಡಿ ಶೇ.20ರಷ್ಟು ಅನುದಾನವನ್ನು ಅರಣ್ಯೀಕರಣಕ್ಕೆ ಬಳಸುವ ಅವಕಾಶವಿದ್ದು, ಇದರ ಮೂಲಕ ಸಾಮಾಜಿಕ ಅರಣ್ಯವನ್ನು ಪರಿಣಾಮಕಾರಿಯಾಗಿ ಬೆಳೆಸಬಹುದು ಎಂದು ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ತಿಳಿಸಿದರು.
ಸಮೀಪದ ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯಲ್ಲಿ ನಡೆದ ಸಾಮಾಜಿಕ ಅರಣ್ಯ ಸಂರಕ್ಷಣೆಯ ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಸಾಮಾಜಿಕ ಅರಣ್ಯದ ಮಹತ್ವವನ್ನು ವಿವರಿಸಿದರು.

ವೃಕ್ಷಲಕ್ಷ ಆಂದೋಲನದ ಹನಿಯ ರವಿ ಮಾತನಾಡಿ, ಯಾವುದೇ ಕಾರಣಕ್ಕೂ ಸಾಮಾಜಿಕ ಅರಣ್ಯದಲ್ಲಿ ಅಕೇಶಿಯಾ ಮರಗಳನ್ನು ನೆಡಬಾರದು. ಬದಲಾಗಿ ಸಹಜ ಮಿಶ್ರ ಅರಣ್ಯ ಬೆಳೆಯಲು ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶಿಸರ ಮಾತನಾಡಿ, ಶರಾವತಿ ಉಪನದಿಗಳ ಉಗಮ ಪ್ರದೇಶಗಳಲ್ಲಿ ಹಿಂದೆ ನಿರ್ಮಿಸಿದ ಸಾಮಾಜಿಕ ಅರಣ್ಯದಿಂದ ಅಮ್ಮನಘಟ್ಟ ಪ್ರದೇಶ ಸಂರಕ್ಷಣೆ ಸಾಧ್ಯವಾಗಿದೆ ಎಂದು ನೆನಪಿಸಿದರು.
ಕೇಶವಪುರದ ಟಿ. ಮಂಜುನಾಥ್ ಮಾತನಾಡಿ, 1980ರ ದಶಕದಲ್ಲಿ ಎಂಪಿಎಂ ವಿರುದ್ಧ ಹೋರಾಟ ನಡೆಸಿ ಸಾಮಾಜಿಕ ಅರಣ್ಯಕ್ಕೆ ಅವಕಾಶ ಕಲ್ಪಿಸಿದ್ದರಿಂದ ಇಂದು ಸಹಜ ಅರಣ್ಯ ಬೆಳೆಯಲು ಅನುಕೂಲವಾಗಿದೆ ಎಂದರು.

ಆಂದೋಲನದ ಸಂಚಾಲಕ ಕೆ. ವೆಂಕಟೇಶ್, ಫಹಣಿಯಲ್ಲಿ ಸಾಮಾಜಿಕ ಅರಣ್ಯವನ್ನು ಪ್ರತ್ಯೇಕವಾಗಿ ನಮೂದಿಸಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಕೆ. ಹುಣಸವಳ್ಳಿಯ ಸಾಮಾಜಿಕ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ವೃಕ್ಷಾರೋಪಣ ಹಾಗೂ ಬೀಜದುಂಡೆ ಬಿತ್ತನೆ ನಡೆಸಲಾಯಿತು. ಅಲ್ಲಿನ ಸಹಜ ಸಮ್ಮಿಶ್ರ ಅರಣ್ಯದ ಸಂವರ್ಧನೆಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿತು.
ಸಭೆಯಲ್ಲಿ ಎಸಿಎಫ್ ಪ್ರಭಾಕರ್, ವಲಯಾರಣ್ಯಾಧಿಕಾರಿ ರಾಘವೇಂದ್ರ, ಚಕ್ರವಾಕ ಸುಬ್ರಹ್ಮಣ್ಯ, ಕೆ.ಪಿ. ಕೃಷ್ಣಮೂರ್ತಿ, ಧನುಷ್ ಸಾರಾ, ಕುಮಾರಗೌಡ, ಶ್ರೀಪಾದ ಗದ್ದೆಮನೆ, ಶ್ರೀಪಾದ ಬಿಚ್ಚುಗತ್ತಿ, ಅರಣ್ಯ ಇಲಾಖೆ ಹಾಗೂ ತಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

















Leave a Reply