ಹೊಸನಗರ: ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಎಸ್ ಐ ಆರ್ ಸಮೀಕ್ಷೆ ಕಾರ್ಯ ಹೊಸನಗರ ಪಟ್ಟಣದಲ್ಲಿ ಚುರುಕುಗೊಂಡಿದೆ. ತಹಶೀಲ್ದಾರ್ ಭರತ್ರಾಜ್, ಚುನಾವಣಾ ಶಿರಸ್ತೇದಾರ್ ಸತೀಶ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್ ಅವರ ಮಾರ್ಗದರ್ಶನದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮತ್ತು ಬಿಎಲ್ಒಗಳು ಮನೆ-ಮನೆಗೆ ತೆರಳಿ ಎಸ್ಎಲ್ಆರ್ ಫಾರಂಗಳನ್ನು ವಿತರಿಸುವುದರ ಜೊತೆಗೆ ಭರ್ತಿ ಕಾರ್ಯವನ್ನೂ ನಡೆಸುತ್ತಿದ್ದಾರೆ.
ಚುನಾವಣಾ ಆಯೋಗ ನಿಗದಿಪಡಿಸಿರುವ ಅಂತಿಮ ದಿನಾಂಕದೊಳಗೆ ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶದಿಂದ ಸಿಬ್ಬಂದಿ ಪ್ರತಿದಿನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸಮೀಕ್ಷೆ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಹಳ್ಳ-ಕೊಳ್ಳಗಳು ನೀರಿನಿಂದ ತುಂಬಿರುವ ಕಾರಣ ಹಲವು ಕಡೆ ವಾಹನ ಸಂಚಾರಕ್ಕೂ ತೊಂದರೆಯಾಗಿದ್ದು, ಬಿಎಲ್ಒಗಳು ಮನೆಗಳಿಗೆ ತಲುಪಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮೀಕ್ಷೆಯ ವೇಗಕ್ಕೂ ಪರಿಣಾಮ ಬೀಳುತ್ತಿದೆ.
ಇದರ ನಡುವೆಯೂ ಪ್ರತಿದಿನ ಪ್ರಗತಿ ವರದಿ ಸಲ್ಲಿಸುವ ಜವಾಬ್ದಾರಿ ಇರುವುದರಿಂದ ಸಿಬ್ಬಂದಿ ಮಳೆ ನಡುವೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಳೆ ಸ್ವಲ್ಪ ಕಡಿಮೆಯಾದರೆ ಉಳಿದಿರುವ ಮನೆಗಳಿಗೂ ತಲುಪಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವನ್ನು ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.
















Leave a Reply