ಗರ್ತಿಕೆರೆ ಬಳಿ ಕಾರು-ಬೈಕ್ ಡಿಕ್ಕಿ: ಸವಾರನ ತಲೆಗೆ ಗಂಭೀರ ಗಾಯ

Blue and Red Voter Education Banner 20260317 213117 0000 scaled ಗರ್ತಿಕೆರೆ ಬಳಿ ಕಾರು-ಬೈಕ್ ಡಿಕ್ಕಿ: ಸವಾರನ ತಲೆಗೆ ಗಂಭೀರ ಗಾಯ
Spread the love

ರಿಪ್ಪನ್‌ಪೇಟೆ:ಟ್ಟಣದ ಸಮೀಪದ ಗರ್ತಿಕೆರೆ ಕಾಲೇಜು ಮುಂಭಾಗದಲ್ಲಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗರ್ತಿಕೆರೆ ಸಮೀಪದ ಹೊಳೆಕೇವಿ ಗ್ರಾಮದ ನಿವಾಸಿ ರಾಜು ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಅವರು ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಎದುರು ದಿಕ್ಕಿನಿಂದ ಬರುತ್ತಿದ್ದ ಸಾಗರ ಮೂಲದ ಕ್ರೇಟಾ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿ ಪರಿಣಾಮ ರಾಜು ರಸ್ತೆ ಮೇಲೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದ್ದು, ಅಪಘಾತದ ಸುದ್ದಿ ತಿಳಿದು ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿ ಗಾಯಾಳುವಿನ ರಕ್ಷಣೆಗೆ ಮುಂದಾದರು.

ಈ ವೇಳೆ ಕಾರ್ಯನಿಮಿತ್ತ ತೀರ್ಥಹಳ್ಳಿಗೆ ತೆರಳಿ ಹಿಂದಿರುಗುತ್ತಿದ್ದ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಎಸ್.ಪಿ ಅವರು ಸ್ಥಳಕ್ಕೆ ಆಗಮಿಸಿ ಗಾಯಾಳುವಿನ ಸ್ಥಿತಿಯನ್ನು ಪರಿಶೀಲಿಸಿದರು. ನಂತರ ಸಮಯಪ್ರಜ್ಞೆ ತೋರಿದ ಅವರು ಗಾಯಾಳುವನ್ನು ಸಮಾಧಾನಪಡಿಸಿ ತಕ್ಷಣವೇ ಖಾಸಗಿ ವಾಹನದ ಮೂಲಕ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

ಪ್ರಾಥಮಿಕ ಚಿಕಿತ್ಸೆ ಬಳಿಕ ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *