ಹೊಸನಗರ: ತಾಲೂಕಿನ ಪಟ್ಟಣದ ಹೊರವಲಯದ ಪಟಗುಪ್ಪ ಸೇತುವೆ ಬಳಿ ಶುಕ್ರವಾರ ಸಂಜೆ ಮೀನು ಹಿಡಿಯುವ ನೆಪದಲ್ಲಿ ಬಂದ ನಾಲ್ವರು ಮುಸ್ಲಿಂ ಯುವಕರು ಗೋವೊಂದನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಶುಕ್ರವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಪಟಗುಪ್ಪ ಸೇತುವೆಯ ಸೋಗಿನ ಬಳಿ ನಾಲ್ವರು ಯುವಕರು ಮೀನು ಹಿಡಿಯುವ ನೆಪದಲ್ಲಿ ಬಂದಿದ್ದಾರೆ. ಮಾಂಸ ಮಾಡುವ ದುರುದ್ದೇಶದಿಂದ ಅಲ್ಲಿಯೇ ಇದ್ದ ಗೋವೊಂದನ್ನು ಹಿಡಿದು, ಅದರ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದೇ ಸಮಯದಲ್ಲಿ ಸ್ಥಳೀಯ ಹುಡುಗನೊಬ್ಬ ತನ್ನ ಮನೆಯ ಕಳೆದುಹೋದ ದನವನ್ನು ಹುಡುಕಿಕೊಂಡು ಆ ಭಾಗಕ್ಕೆ ತೆರಳಿದ್ದಾಗ, ಈ ಭೀಕರ ಕೃತ್ಯ ಆತನ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತನಾದ ಆತ, ಗ್ರಾಮಕ್ಕೆ ಓಡಿ ಬಂದು ಸ್ಥಳೀಯ ಯುವಕರಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಊರಿನ ಯುವಕರು ಒಟ್ಟಾಗಿ ಘಟನಾ ಸ್ಥಳದತ್ತ ಧಾವಿಸಿದ್ದಾರೆ. ದೂರದಿಂದಲೇ ಯುವಕರ ಗುಂಪು ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಗೋವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ದುರದೃಷ್ಟವಶಾತ್, ಅಷ್ಟರಲ್ಲಾಗಲೇ ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಗೋವು ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಘಟನೆಯಿಂದ ತೀವ್ರ ಆಕ್ರೋಶಗೊಂಡ ಸ್ಥಳೀಯರು ಕೂಡಲೇ ಪೊಲೀಸ್ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ವಾಪಸ್ ಆಗಿದ್ದಾರೆ.















Leave a Reply