
ರಿಪ್ಪನ್ಪೇಟೆ: ಪಟ್ಟಣದ ತಿಲಕ್ ನಗರ ಸಮೀಪದ ಮದೀನ ಕಾಲೋನಿಯ ಮಸೀದಿ ಹಿಂಭಾಗದಲ್ಲಿರುವ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಗೂ ಇತರೆ ತ್ಯಾಜ್ಯಗಳ ರಾಶಿ ಕಂಡುಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಕಾರ್ಯಕ್ರಮವೊಂದು ಕಳೆದ 2-3 ದಿನಗಳ ಹಿಂದೆ ನಡೆದಿದ್ದು, ಅದರ ಬಳಿಕವೂ ಸ್ಥಳವನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ವಹಿಸಿರುವುದು ತಿಳಿದುಬಂದಿದೆ. ಅಂಗನವಾಡಿಗೆ ಬರುವ ಪುಟ್ಟ ಮಕ್ಕಳು, ನವಜಾತ ಶಿಶುಗಳು ಹಾಗೂ ಬಾಣಂತಿಯರ ಆರೋಗ್ಯದ ಮೇಲೆ ಇದರಿಂದ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಶುಕ್ರವಾರ ಅಂಗನವಾಡಿ ಕೇಂದ್ರದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಅನೇಕ ತಾಯಂದಿರು ಹಾಗೂ ಶಿಶುಗಳು ಆಗಮಿಸುವುದು ಸಹಜ. ಇಂತಹ ಸೂಕ್ಷ್ಮ ಪ್ರದೇಶದಲ್ಲೇ ಕಸದ ರಾಶಿ ಇರುವುದು ಮತ್ತು ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಅಂಗನವಾಡಿ ಶಿಕ್ಷಕಿಯವರು ಸಂಬಂಧಪಟ್ಟ ಖಾಸಗಿ ವ್ಯಕ್ತಿಗಳ ಗಮನಕ್ಕೂ ತಂದಿದ್ದರೂ ಇದುವರೆಗೆ ಸ್ವಚ್ಛತಾ ಕಾರ್ಯ ನಡೆದಿಲ್ಲ ಎನ್ನಲಾಗಿದೆ.
ಇನ್ನಾದರೂ ಸಂಬಂಧಪಟ್ಟ ಗ್ರಾಮಾಡಳಿತ ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡು ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
















Leave a Reply