ಹೊಸನಗರ: ತಿಂಗಳ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಸಾಲಿನಲ್ಲಿ ನಿಂತರೂ ಸರ್ವರ್ ಸಮಸ್ಯೆಯಿಂದ ಪಡಿತರ ಸಿಗದೆ ಜನರು ಪರದಾಡುತ್ತಿರುವ ಪರಿಸ್ಥಿತಿ ಹೊಸನಗರ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಬಡ ಕುಟುಂಬಗಳಿಗೆ ಸರ್ಕಾರ ನೀಡುವ ಪಡಿತರವೇ ತಿಂಗಳ ಬದುಕಿನ ಪ್ರಮುಖ ಆಸರೆಯಾಗಿದ್ದು, ಅದನ್ನು ಪಡೆಯಲು ಮಹಿಳೆಯರು, ವೃದ್ಧರು, ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳನ್ನು ಬದಿಗೊತ್ತಿ ನ್ಯಾಯಬೆಲೆ ಅಂಗಡಿಗಳತ್ತ ಬರುವಂತಾಗಿದೆ. ಆದರೆ ಸರ್ವರ್ ಸಮಸ್ಯೆ ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಬೆಳಗ್ಗೆಯಿಂದ ಸಂಜೆವರೆಗೆ ಸಾಲು: ಪ್ರತಿ ತಿಂಗಳು ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ಸೇರಿದಂತೆ ಸರ್ಕಾರ ನಿಗದಿಪಡಿಸಿರುವ ಪಡಿತರ ಪಡೆಯುತ್ತಾರೆ. ಆದರೆ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸರ್ವರ್ ನಿಧಾನಗತಿಯ ಕಾರಣದಿಂದ ಎಲ್ಲೆಡೆ ವಿತರಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಬೆಳಗ್ಗೆಯೇ ನ್ಯಾಯಬೆಲೆ ಅಂಗಡಿ ಮುಂದೆ ಬಂದು ಸಾಲಿನಲ್ಲಿ ನಿಂತರೂ ಸರದಿ ಬರುವಷ್ಟರಲ್ಲಿ ಸಂಜೆ ಆಗುತ್ತಿದೆ. ಇದರಿಂದ ಕೃಷಿ ಕೆಲಸಕ್ಕೆ ತೆರಳಬೇಕಾದ ರೈತರು, ಕೂಲಿ ಕೆಲಸಕ್ಕೆ ಹೋಗಬೇಕಾದ ಕಾರ್ಮಿಕರು ಹಾಗೂ ಮನೆಕೆಲಸಗಳನ್ನು ನಿರ್ವಹಿಸುವ ಮಹಿಳೆಯರು ದಿನವಿಡೀ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಹೊಸನಗರ ತಾಲೂಕಿನಲ್ಲಿ 24,970 ಕುಟುಂಬಗಳಿಗೆ ಸಮಸ್ಯೆ:
ತಾಲೂಕಿನಲ್ಲಿ ಒಟ್ಟು 46 ನ್ಯಾಯಬೆಲೆ ಅಂಗಡಿಗಳಿದ್ದು, ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿಗಳ ವ್ಯಾಪ್ತಿಯಲ್ಲಿ ಸುಮಾರು 24,970 ಬಡ ಕುಟುಂಬಗಳಿವೆ. ಇಂತಹ ದೊಡ್ಡ ಸಂಖ್ಯೆಯ ಪಡಿತರ ಚೀಟಿದಾರರು ಪ್ರತಿ ತಿಂಗಳು ಪಡಿತರ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾದಾಗ ಅದರ ನೇರ ಪರಿಣಾಮ ಬಡ ಕುಟುಂಬಗಳ ಮೇಲೆಯೇ ಬೀಳುತ್ತಿದೆ.

ಒಬ್ಬರ ಥಂಬ್ಗೆ 40 ನಿಮಿಷ: ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆ ನಿಧಾನಗೊಂಡಿದೆ. ಬೆಳಗ್ಗೆ 9.30ಕ್ಕೆ ವೆಬ್ಸೈಟ್ ತೆರೆದರೂ ಒಬ್ಬರ ಬಯೋಮೆಟ್ರಿಕ್ ಥಂಬ್ಗೆ 40 ನಿಮಿಷಕ್ಕೂ ಹೆಚ್ಚು ಸಮಯ ಬೇಕಾಗುತ್ತಿದೆ. ಹಿಂದೆ ದಿನಕ್ಕೆ 120–150 ಕಾರ್ಡ್ದಾರರಿಗೆ ಪಡಿತರ ನೀಡಲಾಗುತ್ತಿತ್ತು. ಇದೀಗ 40 ಜನರಿಗೂ ವಿತರಿಸಲು ಸಾಧ್ಯವಾಗದ ಸ್ಥಿತಿ ಇದೆ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ.
ಈ ತಿಂಗಳಲ್ಲಿ ಮತ್ತಷ್ಟು ಒತ್ತಡ: ಕೇಂದ್ರ ಸರ್ಕಾರದ ಅಕ್ಕಿ ವಿತರಣೆ ಇರುವುದರಿಂದ ಪಡಿತರ ಚೀಟಿದಾರರಿಗೆ ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಜ್ಯಾದ್ಯಂತ ಪ್ರತಿದಿನ ಲಕ್ಷಾಂತರ ಪಡಿತರ ಚೀಟಿದಾರರು ಬಯೋಮೆಟ್ರಿಕ್ ಮೂಲಕ ಪಡಿತರ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ ಎಂದು ಆಹಾರ ಇಲಾಖೆಯವರು ಹೇಳುತ್ತಿದ್ದಾರೆ.
ಸರ್ವರ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವೇಗವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಹಿಳೆಯರು, ವೃದ್ಧರು ಹಾಗೂ ರೈತರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನಸಾಮಾನ್ಯರ ಒತ್ತಾಯ.
ಸರ್ವರ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಾಜ್ಯಾದ್ಯಂತ ಲಕ್ಷಾಂತರ ಪಡಿತರ ಚೀಟಿದಾರರು ಏಕಕಾಲದಲ್ಲಿ ಬಯೋಮೆಟ್ರಿಕ್ ನೀಡುತ್ತಿರುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಈ ಸಮಸ್ಯೆ ಎದುರಾಗಿದೆ. ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರ ಪರಿಹಾರವಾಗುವ ನಿರೀಕ್ಷೆಯಿದೆ.
- ನಾಗರಾಜ್,ಆಹಾರ ನಿರೀಕ್ಷಕ
ಮನೆಯ ಕೆಲಸಗಳನ್ನು ಬಿಟ್ಟು ಆಟೋ ಮಾಡಿಕೊಂಡು ಬೆಳಗ್ಗೆ 9 ಗಂಟೆಗೆ ಪಡಿತರ ಪಡೆಯಲು ಬಂದಿದ್ದೇನೆ. ಈಗ ಸಂಜೆ 5 ಗಂಟೆಯಾದರೂ ಇನ್ನೂ ಸರತಿ ಸಾಲಿನಲ್ಲೇ ನಿಂತಿದ್ದೇನೆ. ನಮ್ಮಂತಹ ಬಡವರ ಕಷ್ಟವನ್ನು ಕೇಳುವವರು ಯಾರು? ಸರ್ಕಾರ ಕೂಡಲೇ ಈ ಸರ್ವರ್ ಸಮಸ್ಯೆಯನ್ನು ಸರಿಪಡಿಸಿ, ಪಡಿತರ ಪಡೆಯಲು ಸುಗಮ ವ್ಯವಸ್ಥೆ ಮಾಡಬೇಕು.
- ಮೀನಾಕ್ಷಿ, ಕೋಡೂರು
















Leave a Reply