ರಿಪ್ಪನ್ಪೇಟೆ: ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ನಾಗಾರಾಧನೆ ಹಾಗೂ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ವಿಶೇಷ ಪೂಜೆ ಸಲ್ಲಿಸಿ, ನಾಗಾರಾಧನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, “ಪ್ರಕೃತಿಯ ಆರಾಧನೆಯೇ ನಾಗರ ಪಂಚಮಿ ಹಬ್ಬದ ಮಹತ್ವ” ಎಂದು ತಿಳಿಸಿದರು. ಜೈನ ಧರ್ಮದ ಶ್ರೀ ಸುಪಾರ್ಶ್ವನಾಥ ತೀರ್ಥಂಕರರು ಹಾಗೂ ಶ್ರೀ ಪಾರ್ಶ್ವನಾಥ ತೀರ್ಥಂಕರರು ನಾಗದೇವತೆಯ ಕೃಪೆಗೆ ಪಾತ್ರರಾದವರು ಎಂಬ ಐತಿಹ್ಯವಿದ್ದು, ನಾಗದೇವತೆ ರಕ್ಷಕರಾಗಿ ವಿಘ್ನಗಳನ್ನು ನಿವಾರಿಸುತ್ತಾರೆ ಎಂದು ಹೇಳಿದರು.
ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಅಭೀಷ್ಟವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಆಗಮೋಕ್ತ ವಿಧಾನದಂತೆ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ನಾಗದೇವರ ಸನ್ನಿಧಿಯಲ್ಲಿ ಜಗದ್ಗುರುಗಳ ಉಪಸ್ಥಿತಿಯಲ್ಲಿ ಹಾಲು, ಎಳನೀರು, ಅರಿಶಿನ, ಹಣ್ಣು-ಪುಷ್ಪ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ, ಪೂರ್ವ ಪರಂಪರೆಯಂತೆ ನಾಗಾರಾಧನೆ ನೆರವೇರಿಸಲಾಯಿತು. ಊರಿನ ಹಾಗೂ ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಶ್ರೀ ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಶ್ರೀಕ್ಷೇತ್ರದ ಎಲ್ಲಾ ಜಿನಾಲಯಗಳಲ್ಲಿ ನಿತ್ಯಪೂಜೆ ಕೂಡ ನೆರವೇರಿತು.

















Leave a Reply