ಪತ್ರಿಕಾ ದಿನಾಚರಣೆ ಸಂಭ್ರಮ; ಪತ್ರಕರ್ತರ ಸೇವೆಗೆ ಗೌರವ, ಸಾಧಕರಿಗೆ ಸನ್ಮಾನ
ಹೊಸನಗರ: ಡಿಜಿಟಲ್ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಪತ್ರಕರ್ತರು ತಮ್ಮ ವೃತ್ತಿಪರತೆಯ ಮೂಲಕ ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಭರತ್ ರಾಜ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಶಾಖೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಆಗುಹೋಗುಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಡಿಜಿಟಲ್ ಯುಗದಲ್ಲೂ ನವೀನ ತಂತ್ರಜ್ಞಾನ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಪತ್ರಕರ್ತರು ಪತ್ರಿಕಾರಂಗಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಂಘದ ತಾಲೂಕು ಶಾಖೆಯ ಅಧ್ಯಕ್ಷ ರವಿ ನಾಗರಕೊಡಿಗೆ ಮಾತನಾಡಿ, ಸಮಾಜದ ಬೆಳವಣಿಗೆಗಳನ್ನು ದಾಖಲಿಸುವುದರ ಜೊತೆಗೆ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಂಘ ನಿರಂತರವಾಗಿ ಮಾಡುತ್ತಿದೆ ಜೊತೆಗೆ ಈ ಬಾರಿ ಅತಿಹೆಚ್ಚು ಪತ್ರಿಕೆಗಳನ್ನು ಓದುಗರನ್ನು ಸನ್ಮಾನಿಸುವ ಮೂಲಕ ಓದುಗರ ಮಹತ್ವವನ್ನೂ ಗುರುತಿಸಲಾಗಿದೆ ಎಂದು ಹೇಳಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್ (ಟೆಲೆಕ್ಸ್) ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಮುಖ್ಯವಾಹಿನಿ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು. ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗವಾಗಿ ತನ್ನ ಜವಾಬ್ದಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ನಿರ್ದೇಶಕ ರವಿ ಬಿದನೂರು ಮಾತನಾಡಿ, ಪತ್ರಿಕಾರಂಗದಲ್ಲಿ ಹೊಸನಗರ ತಾಲೂಕಿನ ಕೊಡುಗೆ ಗಮನಾರ್ಹವಾಗಿದೆ. ಸಮಾಜಮುಖಿ ಚಿಂತನೆಗಳನ್ನು ಪ್ರತಿಬಿಂಬಿಸುವ ವಿಶೇಷ ಲೇಖನಗಳು ಇಲ್ಲಿನ ಪತ್ರಕರ್ತರ ಸೇವೆಯ ಕೈಗನ್ನಡಿ ಎಂದು ಹೇಳಿದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿಗಳು ಗಾನ, ನೃತ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪತ್ರಿಕಾರಂಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಜಿ.ವಿ. ವೇಣುಗೋಪಾಲ್, ಚಿದಾನಂದಸ್ವಾಮಿ, ಪತ್ರಿಕಾ ಪ್ರತಿನಿಧಿಗಳಾದ ಶಿವಕುಮಾರ್ ಜೋಯ್ಸ್, ವಿಜೇಂದ್ರಪ್ರಭು, ಹೆಚ್.ಎನ್. ನಾಗರಾಜ ಹಾಗೂ ಅತಿಹೆಚ್ಚು ಪತ್ರಿಕೆಗಳನ್ನು ಓದುತ್ತಿರುವ ಹೆಚ್.ಎಸ್. ಮನ್ಸೂರ್ ಅಹಮದ್ ಅವರನ್ನು ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಉಸ್ತುವಾರಿ ಸತ್ಯನಾರಾಯಣ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಂಬರ ಹೆಚ್., ಉಪಾಧ್ಯಕ್ಷ ಪರಶುರಾಮ, ಖಜಾಂಚಿ ಶಾಂತಾರಾಮ್, ನಿರ್ದೇಶಕರಾದ ಬಸವರಾಜ್, ನಾಗೇಶ್ ಎಸ್. ನಾಯಕ್, ನರಸಿಂಹಮೂರ್ತಿ, ಮನು ಎಸ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು.
















Leave a Reply