ಮೇ. 1 ರಂದು ಸಂಜೆ 4:00 ಯಿಂದ ಸಿದ್ದಪ್ಪನ ಗುಡಿ ಯಿಂದ ವಿನಾಯಕ ವೃತ್ತದ ಭವ್ಯ ಸ್ವಾಗತ ಮೆರವಣಿಗೆ.
ರಿಪ್ಪನ್ ಪೇಟೆ: ದೇಶ ಸೇವೆಯಲ್ಲಿ ದೀರ್ಘಕಾಲ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿರುವ ಸೈನಿಕ ಕುಮಾರ್ ಎ. ಅವರು ತವರೂರಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೇ 1ರಂದು ರಿಪ್ಪನ್ ಪೇಟೆಯಲ್ಲಿ ಭವ್ಯ ಸ್ವಾಗತ ಶೋಭಾಯಾತ್ರೆ ಆಯೋಜಿಸಲಾಗಿದೆ.
ಕುಮಾರ್ ಎ. ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿ ಸತತ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅವರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಅವರು ಸಹ 22 ವರ್ಷಗಳ ಕಾಲ ದೇಶ ಸೇವೆಯಲ್ಲಿ ನಿರತರಾಗಿದ್ದರು. ದೆಹಲಿ, ಪಂಜಾಬ್, ಗುಜರಾತ್, ಜಮ್ಮು-ಕಾಶ್ಮೀರ, ತ್ರಿಪುರ, ಅಸ್ಸಾಂ, ಮೇಘಾಲಯ, ವಿಶಾಖಪಟ್ಟಣಂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಇವರ ಸಾಧನೆ ಗಮನಾರ್ಹವಾಗಿದೆ.

ಸೇವಾ ವಿವರ:🇮🇳
ನವಂಬರ್ 1990 ರಿಂದ ಜುಲೈ 1991ರವರೆಗೆ ದೆಹಲಿಯಲ್ಲಿ 103ನೇ ಬೆಟಾಲಿಯನ್ನಲ್ಲಿ ತರಬೇತಿ ಪಡೆದ ಅವರು, ಬಳಿಕ ಆಗಸ್ಟ್ 1991 ರಿಂದ ಜೂನ್ 1992ರವರೆಗೆ ಪಂಜಾಬ್ನಲ್ಲಿ 103ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿದರು.
ಡಿಸೆಂಬರ್ 1992 ರಿಂದ ಆಗಸ್ಟ್ 1998ರವರೆಗೆ ದೆಹಲಿಯ 103ನೇ RAF ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿದ ಅವರು, ಸೆಪ್ಟೆಂಬರ್ 1998 ರಿಂದ ಜೂನ್ 2002ರವರೆಗೆ ಗುಜರಾತ್ನ 135ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ಜುಲೈ 2002 ರಿಂದ ಆಗಸ್ಟ್ 2005ರವರೆಗೆ ಜಮ್ಮು-ಕಾಶ್ಮೀರ ಹಾಗೂ ತ್ರಿಪುರ ರಾಜ್ಯಗಳಲ್ಲಿ 68ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿದ ನಂತರ, ಸೆಪ್ಟೆಂಬರ್ 2005 ರಿಂದ ಫೆಬ್ರವರಿ 2006ರವರೆಗೆ ಗಾಂಧಿನಗರದ ಗ್ರೂಪ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು.ಹೆಡ್ ಕಾನ್ಸ್ಟೇಬಲ್ ಹುದ್ದೆಗೆ ಪದೋನ್ನತಿ ಪಡೆದ ಬಳಿಕ ಮಾರ್ಚ್ 2006 ರಿಂದ ಜುಲೈ 2012ರವರೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF)ಯಲ್ಲಿ ಸೇವೆ ಸಲ್ಲಿಸಿದರು.

ಆಗಸ್ಟ್ 2012 ರಿಂದ 2015ರವರೆಗೆ ವಿಶಾಖಪಟ್ಟಣದ 198ನೇ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸಿದ ಅವರು, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪದೋನ್ನತಿ ಪಡೆದ ನಂತರ ಸೆಪ್ಟೆಂಬರ್ 2019ರವರೆಗೆ ಅದೇ ಘಟಕದಲ್ಲಿ ಮುಂದುವರಿದರು.
ನಂತರ 2019ರಿಂದ ಜೂನ್ 2023ರವರೆಗೆ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ 120ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿದರು.
2023ರಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪದೋನ್ನತಿ ಪಡೆದ ಅವರು, ಏಪ್ರಿಲ್ 2026ರವರೆಗೆ ಭದ್ರಾವತಿಯ 97ನೇ RAF ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿದರು.
ದಿನಾಂಕ 30/04/2026 ರಂದು ಸ್ವಯಂ ಸೇವಾ ನಿವೃತ್ತಿ ಪಡೆದ ಅವರು ಇದೀಗ ತಮ್ಮ ಸ್ವಂತ ಊರಾದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದಾರೆ.
ಇವರು ಮೇ 1ರಂದು ಸಂಜೆ 4 ಗಂಟೆಗೆ ರಿಪ್ಪನ್ ಪೇಟೆ ಗ್ರಾಮಕ್ಕೆ ಆಗಮಿಸಲಿದ್ದು, ಸಿದ್ದಪ್ಪನಗುಡಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ವಿನಾಯಕ ವೃತ್ತದವರೆಗೆ ಕರೆತಂದು ಬಳಿಕ ಸಭಾ ಕಾರ್ಯಕ್ರಮದೊಂದಿಗೆ ಗೌರವಪೂರ್ವಕ ಸ್ವಾಗತ ನೀಡಲಾಗುವುದು.
ಸ್ಥಳೀಯರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೀರ ಯೋಧನಿಗೆ ಗೌರವ ಸಲ್ಲಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಸಂಪಾದಕೀಯ :
ದೇಶ ಸೇವೆಯ ಗರಿಮೆ – ವೀರ ಯೋಧರಿಗೆ ನಮ್ಮ ನಮನ
ಒಂದು ಸಮಾಜದ ಮೌಲ್ಯವನ್ನು ಅಳೆಯುವುದಾದರೆ ಅದು ತನ್ನ ವೀರರನ್ನು ಹೇಗೆ ಗೌರವಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ದೀರ್ಘ 36 ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿಸಿಕೊಂಡು ತನ್ನ ಜೀವನವನ್ನು ರಾಷ್ಟ್ರದ ಭದ್ರತೆಗೆ ಅರ್ಪಿಸಿದ ಸೈನಿಕ ಕುಮಾರ್ ಎ. ಅವರ ತವರೂರಿಗೆ ಆಗಮನವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಸಮಾಜದ ಕೃತಜ್ಞತೆಯ ಪ್ರತೀಕವಾಗಿದೆ.

ಒಬ್ಬ ಸೈನಿಕ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವುದು ಎಂದರೆ ಅದು ಸಾದಾರಣ ವಿಷಯವಲ್ಲ. ಪ್ರತಿಯೊಂದು ನಿಯೋಜನೆಯಲ್ಲೂ ಸವಾಲುಗಳು, ಅಪಾಯಗಳು ಮತ್ತು ತ್ಯಾಗಗಳು ತುಂಬಿರುತ್ತವೆ. ಇಂತಹ ಪರಿಸ್ಥಿತಿಗಳಲ್ಲೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸಿದ ಕುಮಾರ್ ಎ. ಅವರ ಸೇವೆ ನಮ್ಮೆಲ್ಲರಿಗೂ ಹೆಮ್ಮೆ ತರುವಂತದ್ದು. ಅವರ ಪತ್ನಿ ಪದ್ಮಾವತಿ ಅವರೂ ಸಹ ಸೈನ್ಯದಲ್ಲಿ ಸೇವೆ ಸಲ್ಲಿಸಿ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಈ ಕುಟುಂಬದ ದೇಶಭಕ್ತಿಯೇ ಒಂದು ಜೀವಂತ ಸಾಕ್ಷಿಯಾಗಿದೆ.
ಇಂದು ನಾವು ನೋಡುತ್ತಿರುವ ಶಾಂತಿ, ಭದ್ರತೆ ಮತ್ತು ಸುಸ್ಥಿರ ಜೀವನಶೈಲಿ ಇಂತಹ ಅನೇಕ ವೀರರ ತ್ಯಾಗದ ಫಲ. ಆದರೆ ಬಹುಶಃ, ಅವರ ಸೇವೆಯ ಮೌಲ್ಯವನ್ನು ನಾವು ಸಾಕಷ್ಟು ಬಾರಿ ಅರಿಯುವುದಿಲ್ಲ. ಇಂತಹ ಸಂದರ್ಭಗಳು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಸೈನಿಕರ ತ್ಯಾಗಕ್ಕೆ ನಾವು ತಕ್ಕ ಗೌರವ ನೀಡುತ್ತಿದ್ದೇವೇ ಎಂದು.
ರಿಪ್ಪನ್ ಪೇಟೆಯಲ್ಲಿ ನಡೆಯಲಿರುವ ಸ್ವಾಗತ ಮೆರವಣಿಗೆ ಯಾತ್ರೆ ಕೇವಲ ಒಂದು ಆಚರಣೆಯಲ್ಲ, ಅದು ಮುಂದಿನ ಪೀಳಿಗೆಗೆ ಪ್ರೇರಣೆಯ ಮೂಲವೂ ಹೌದು. ಯುವಕರು ಇಂತಹ ವೀರರ ಜೀವನವನ್ನು ನೋಡಿ ದೇಶ ಸೇವೆಯತ್ತ ಆಕರ್ಷಿತರಾಗಬೇಕು. ದೇಶಭಕ್ತಿ ಎಂದರೆ ಮಾತಿನಲ್ಲೇ ಅಲ್ಲ, ಕಾರ್ಯದಲ್ಲಿಯೂ ತೋರಿಸಬೇಕು ಎಂಬ ಸಂದೇಶವನ್ನು ನಾವೆಲ್ಲ ಸೇರಿ ಸಾರೋಣ.
ಸೈನಿಕ ಕುಮಾರ್ ಎ. ಅವರಂತಹ ವೀರರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅವರ ಸೇವೆಯ ಸ್ಮರಣೆ ನಮ್ಮ ಹೃದಯಗಳಲ್ಲಿ ಸದಾ ಉಳಿಯಲಿ. ಇಂತಹ ವ್ಯಕ್ತಿತ್ವಗಳು ನಮ್ಮ ಸಮಾಜದ ಶಕ್ತಿಯ ಮೂಲವಾಗಿದ್ದು, ಅವರ ಕಥೆಗಳು ಸದಾ ನಮ್ಮನ್ನು ಪ್ರೇರೇಪಿಸುತ್ತವೆ.
– ಕಾರ್ತಿಕ್ ಕೌಂಡಿನ್ಯ
ಭಾರತ್ ಮಾತಾ ಕೀ ಜೈ 🇮🇳
















Leave a Reply