ಶಿವಮೊಗ್ಗ : ಪರಿಶ್ರಮ, ಸಮಯದ ಸಮರ್ಪಣೆ ಮತ್ತು ಪೋಷಕರ ಪ್ರೋತ್ಸಾಹದಿಂದ ಹೊಸನಗರ ತಾಲೂಕಿನ ವಿದ್ಯಾರ್ಥಿನಿ ಡಾ. ಸಂಜನಾ ಎಸ್. ರಾವ್ ಅವರು ಬಿ.ಎ.ಎಂ.ಎಸ್ (Bachelor of Ayurvedic Medicine and Surgery) ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ ಸಂಜನಾ ಅವರು ನಿರಂತರ ಪರಿಶ್ರಮ ಮತ್ತು ಗುರಿಯತ್ತ ಇರುವ ದೃಢ ಸಂಕಲ್ಪದ ಮೂಲಕ ಈ ಸಾಧನೆಯನ್ನು ಸಾಧಿಸಿದ್ದಾರೆ.
ಇವರು ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಶಶಿಧರ ಎಸ್. ರಾವ್ ಹಾಗೂ ದೀಪಾ ಎಸ್. ರಾವ್ ದಂಪತಿಯ ಪುತ್ರಿಯಾಗಿದ್ದು, ತಮ್ಮ ಸಾಧನೆಗೆ ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಸ್ನೇಹಿತರ ಸಹಕಾರವೇ ಮುಖ್ಯ ಕಾರಣ ಎಂದು ತಿಳಿಸಿದ್ದಾರೆ.

ಬಾಲ್ಯದಿಂದಲೇ ಓದಿನ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಸಂಜನಾ ಅವರು ತಮ್ಮ ಸಮಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಪರಿಶ್ರಮದೊಂದಿಗೆ ಅಧ್ಯಯನ ಮಾಡುತ್ತಾ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾಭ್ಯಾಸದ ಅವಧಿಯಲ್ಲಿ ಕುಟುಂಬದವರ ಪ್ರೋತ್ಸಾಹ ಹಾಗೂ ಸ್ನೇಹಿತೆಯರ ಸಹಕಾರ,ಶಿಕ್ಷಣ ಸಂಸ್ಥೆಯ ಉಪನ್ಯಾಸಕರ ಮಾರ್ಗದರ್ಶನ ಅವರ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ.
ಪರೀಕ್ಷೆಯಲ್ಲಿ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಸಂಜನಾ ಅವರು ಮೌಲಿಕ ಸಿದ್ಧಾಂತ ಮತ್ತು ಅಷ್ಟಾಂಗ ಹೃದಯ, ಚರಕ ಪೂರ್ವಾರ್ಧ ಹಾಗೂ ಶಲ್ಯ ತಂತ್ರ ವಿಷಯಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಕ್ರಿಯಾಶರೀರ ವಿಷಯದಲ್ಲಿ ದ್ವಿತೀಯ ರ್ಯಾಂಕ್, ಸಂಸ್ಕೃತದಲ್ಲಿ ನಾಲ್ಕನೇ ರ್ಯಾಂಕ್, ದ್ರವ್ಯಗುಣದಲ್ಲಿ ಆರನೇ ರ್ಯಾಂಕ್ ಹಾಗೂ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಷಯದಲ್ಲಿ ಏಳನೇ ರ್ಯಾಂಕ್ ಪಡೆದು ಒಟ್ಟು 5 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪರೀಕ್ಷೆಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆದಿದ್ದು, ಸಂಜನಾ ಅವರ ಈ ಸಾಧನೆ ಹೊಸನಗರ ತಾಲೂಕಿಗೆ ಹೆಮ್ಮೆ ತಂದಿದೆ. ಇವರು ಓದಿದ ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಶಾಲೆಗೂ ಹೆಮ್ಮೆ ತಂದಿದ್ದಾರೆ.
ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಸಂಜನಾ ಅವರು, ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಸ್ನೇಹಿತರ ಸಹಕಾರವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಕನಸನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
“ಸಂಜನಾ ತನ್ನ ಪರಿಶ್ರಮ, ತನ್ನ ಸಮಯ ಸಮರ್ಪಣೆ ಯಿಂದ ಮತ್ತು ಓದಿನಿಂದ ಈ ಸಾಧನೆ ಮಾಡಿದ್ದಾಳೆ. ಅವಳ ಸಾಧನೆಗೆ ನಾವು ತುಂಬಾ ಸಂತೋಷಪಡುತ್ತೇವೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿ.”
- ಶಶಿಧರ ಎಸ್. ರಾವ್, ತಂದೆ
“ಈ ಸಾಧನೆ ನನ್ನ ಪರಿಶ್ರಮದ ಜೊತೆಗೆ ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಸ್ನೇಹಿತರ ಸಹಕಾರದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದು ನನ್ನ ಗುರಿ,”
- ಸಂಜನಾ ಎಸ್. ರಾವ್
ಸಂಜನಾ ಅವರ ಈ ಸಾಧನೆಗೆ ಕುಟುಂಬದವರು, ಶಿಕ್ಷಕರು, ಸ್ನೇಹಿತರು ಹಾಗೂ ಊರಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.
















Leave a Reply