
“ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನಿವಾರ್ಯ” – ಕುಮಾರ್ ಪುಷ್ಕರ್
ಶಿವಮೊಗ್ಗ, ಮೇ 14: ಅರಣ್ಯ ಪ್ರದೇಶಗಳ ಸುತ್ತ ಮಾನವ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾನವ–ವನ್ಯಜೀವಿ ಸಂಘರ್ಷ ಗಂಭೀರ ಸ್ವರೂಪ ಪಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಹೇಳಿದರು.

ಅವರು ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ಕರ್ನಾಟಕ ಅರಣ್ಯ ಇಲಾಖೆ, ಚಿಕ್ಕಮಗಳೂರು ವೃತ್ತ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಮಾನವ–ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಸುಮಾರು 40 ಸಾವಿರ ಚದರ ಕಿ.ಮೀ. ಅರಣ್ಯ ಪ್ರದೇಶಗಳಲ್ಲಿ 11 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಿತ ವಲಯವಾಗಿ ಗುರುತಿಸಲಾಗಿದ್ದು, ಸರ್ಕಾರದ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಳ ಕಂಡಿದೆ ಎಂದು ತಿಳಿಸಿದರು.
ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು, ವಾಣಿಜ್ಯ ಬೆಳೆಗಳ ವಿಸ್ತರಣೆ, ರಸ್ತೆ ಅಭಿವೃದ್ಧಿ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಇದರಿಂದ ಸಂಘರ್ಷ ಹೆಚ್ಚುತ್ತಿದೆ ಎಂದು ಹೇಳಿದರು.
ಸಂಘರ್ಷ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಸೌರ ಬೇಲಿ ಹಾಗೂ ಆನೆ ನಿರೋಧಕ ಕಂದಕಗಳಂತಹ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ದೀರ್ಘಕಾಲೀನ ಪರಿಹಾರಕ್ಕಾಗಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಾಕಾನ್ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಎಚ್.ಎನ್. ಕುಮಾರ್ ಮಾತನಾಡಿ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವು ಹೊಸ ಸಮಸ್ಯೆಯಲ್ಲ; ಅದು ಮಾನವ ನಾಗರಿಕತೆಯ ಇತಿಹಾಸದಷ್ಟೇ ಹಳೆಯದು ಎಂದು ಹೇಳಿದರು.
ಪ್ರಾಚೀನ ನೇಪಾಳದ ಪಶುಪತಿ ಶಿಲ್ಪಕಲೆ ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧದ ಸಂಕೇತವಾಗಿದೆ. ‘ಪಶು’ ಎಂದರೆ ಪ್ರಾಣಿ ಹಾಗೂ ‘ಪತಿ’ ಎಂದರೆ ರಕ್ಷಕ ಎಂಬ ಅರ್ಥವಿದ್ದು, ಹಿಂದಿನ ಕಾಲದಲ್ಲಿಯೇ ಪ್ರಾಣಿಗಳ ಸಂರಕ್ಷಣೆಯ ಚಿಂತನೆ ಇತ್ತು ಎಂದು ವಿವರಿಸಿದರು.

ಐಎಫ್ಎಸ್ ಅಧಿಕಾರಿ ಪುಲ್ಕಿತ್ ಮೀನಾ ಮಾತನಾಡಿ, ತಂತ್ರಜ್ಞಾನ ಮಾತ್ರದಿಂದ ವನ್ಯಜೀವಿ ಸಂರಕ್ಷಣೆ ಸಾಧ್ಯವಿಲ್ಲ. ಜನರಲ್ಲಿ ಸಹಿಷ್ಣುತೆ ಮತ್ತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ. ಶರತ್ ಅನಂತಮೂರ್ತಿ ವಹಿಸಿದ್ದರು. ಈ ವೇಳೆ ಪ್ರೊ. ಟಿ.ಎನ್. ಪ್ರಕಾಶ್ ಕಮ್ಮರಡಿ, ಯಶ್ಪಾಲ್ ಕ್ಷೀರಸಾಗರ್ ಹಾಗೂ ವನ್ಯಜೀವಿ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.
















Leave a Reply