ಹೊಸನಗರ: ಕನ್ನಡ ಭಾಷೆಯ ಅಸ್ತಿತ್ವ ಮತ್ತು ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಓದು ಹಾಗೂ ಬರವಣಿಗೆಯ ಅಭ್ಯಾಸವನ್ನು ಬೆಳೆಸುವುದು ಅತ್ಯಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಮ್ ರಾವ್ ಹೇಳಿದರು.
ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಿ ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಕನ್ನಡದಲ್ಲಿ ಬರೆಯುವ ಹವ್ಯಾಸ ಕ್ರಮೇಣ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಭಾಷೆಯ ಮೇಲಿನ ಹಿಡಿತವು ಕೇವಲ ಓದಿನಿಂದ ಮಾತ್ರವಲ್ಲ, ನಿರಂತರ ಬರವಣಿಗೆಯ ಅಭ್ಯಾಸದಿಂದಲೂ ವೃದ್ಧಿಯಾಗುತ್ತದೆ. ಉತ್ತಮ ಪದಸಂಪತ್ತು, ವ್ಯಾಕರಣ ಶುದ್ಧತೆ ಹಾಗೂ ಸ್ಪಷ್ಟ ಅಭಿವ್ಯಕ್ತಿ ಬರವಣಿಗೆಯ ಮೂಲಕ ಬೆಳೆಯುತ್ತದೆ. ಆದರೆ ವಿದ್ಯಾರ್ಥಿಗಳಲ್ಲಿ ಕನ್ನಡ ವಾಕ್ಯರಚನೆ ಮತ್ತು ಪದಬಳಕೆಯಲ್ಲಿ ಕಂಡುಬರುವ ತಪ್ಪುಗಳು ಹೆಚ್ಚುತ್ತಿರುವುದು ಭಾಷೆಯ ಭವಿಷ್ಯದ ದೃಷ್ಟಿಯಿಂದ ಕಳವಳಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಹೆಮ್ಮೆಯ ಶಿವಮೊಗ್ಗ ಜಿಲ್ಲೆ – ಪ್ರವಾಸಿ ತಾಣ ಉಳಿವಿಗಾಗಿ ನಮ್ಮ ಪಾತ್ರ” ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೊಸನಗರ ತಾಲೂಕಿನ ಗುಬ್ಬಿಗ ಗ್ರಾಮದ ಪದವಿ ವಿದ್ಯಾರ್ಥಿನಿ ಜಿ.ಪಿ. ಅನನ್ಯ ಪ್ರಥಮ ಬಹುಮಾನ ಪಡೆದರು. ಆಲಗೇರಿ ಮಂಡ್ರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜೆ. ಆಯುಶ್ರೀ ದ್ವಿತೀಯ ಹಾಗೂ ಸಾಗರ ತಾಲೂಕಿನ ದುಗ್ಗಿನಕೊಡ್ಡು ಗ್ರಾಮದ ವಿದ್ಯಾರ್ಥಿನಿ ಡಿ.ವಿ. ಭಾವನ ತೃತೀಯ ಬಹುಮಾನ ಗಳಿಸಿದರು. ಸ್ಪರ್ಧೆಯಲ್ಲಿ ಒಟ್ಟು 26 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸಂತೋಷ್, ಶಶಿಭೂಷಣ್, ತೀರ್ಥೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.













Leave a Reply