
ಹೊಸನಗರ : ಪಟ್ಟಣದ ಮೆಡಿಕಲ್ ಶಾಪ್ ಹಾಗೂ ಜಿಲ್ಲಾ ಮೆಡಿಕಲ್ಸ್ ಶಾಪ್ ಮಾಲೀಕರ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪ ಅವರ ನೇತೃತ್ವದಲ್ಲಿ ತಾಲ್ಲೂಕು ಕಂದಾಯ ಇಲಾಖೆಯ ಶಿರಸ್ತೆದಾರ್ ಕಟ್ಟೆ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಜಿಲ್ಲಾ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪ, ದೇಶದಾದ್ಯಂತ ಆನ್ಲೈನ್ ಮೂಲಕ ಔಷಧಿಗಳ ಮಾರಾಟ ಹೆಚ್ಚುತ್ತಿರುವುದರಿಂದ ಸ್ಥಳೀಯ ಮೆಡಿಕಲ್ ಅಂಗಡಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಲ್ಲಿ ಔಷಧಿಗಳ ದರದಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತಿದ್ದು, ಕೆಲವೆಡೆ ಕಳಪೆ ಗುಣಮಟ್ಟದ ಔಷಧಿಗಳೂ ಸರಬರಾಜಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇಂತಹ ಅಕ್ರಮಗಳನ್ನು ತಡೆಯಲು ಒಂದು ದಿನದ ಮಟ್ಟಿಗೆ ಔಷಧಿ ಅಂಗಡಿಗಳ ಬಂದ್ ಅನಿವಾರ್ಯವಾಗಿದೆ ಎಂದರು.
ಸರ್ಕಾರ ಹಾಗೂ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನ್ಲೈನ್ ಔಷಧಿ ಸೇವೆ, ಔಷಧಿಗಳ ದರ ವ್ಯತ್ಯಾಸ ಮತ್ತು ಕಳಪೆ ಗುಣಮಟ್ಟದ ಔಷಧಿ ಸರಬರಾಜು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಜನೌಷಧಿ ಕೇಂದ್ರಗಳಲ್ಲಿ ಸರ್ಕಾರದ ಔಷಧಿಗಳ ಹೊರತಾಗಿ ಖಾಸಗಿ ಮೆಡಿಕಲ್ ಅಂಗಡಿಗಳಲ್ಲಿ ದೊರೆಯುವ ಔಷಧಿಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಮೆಡಿಕಲ್ ಅಂಗಡಿಗಳ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮೆಡಿಕಲ್ ಅಂಗಡಿ ಮಾಲೀಕರಾದ ಸಣ್ಣಕ್ಕಿ ಮಂಜುನಾಥ್, ದೀಪಕ್, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















Leave a Reply