ರಿಪ್ಪನ್ಪೇಟೆ: ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ವೈಭವದ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬಂದಿದ್ದು, ಭಕ್ತರು ಭಕ್ತಿ ಶ್ರದ್ಧೆಯಿಂದ ದೇವಿಯ ದರ್ಶನ ಪಡೆದು ಹರಕೆ-ಕಾಣಿಕೆಗಳನ್ನು ಸಮರ್ಪಿಸಿ ಸಂಭ್ರಮಿಸಿದರು.
ಇಂದು ಮುಂಜಾನೆಯಿಂದಲೇ ದೇವಾಲಯದ ಮುಂಭಾಗದಲ್ಲಿ ಭಕ್ತರ ಸಮೂಹ ಜಮಾಯಿಸಿತ್ತು. ಸರತಿ ಸಾಲಿನಲ್ಲಿ ನಿಂತ ಭಕ್ತರು ಮಾರಿಕಾಂಬ ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡರು. ಭಕ್ತರು ಹಣ್ಣು-ಕಾಯಿ ಸೇರಿದಂತೆ ವಿವಿಧ ಹರಕೆಗಳನ್ನು ಸಮರ್ಪಿಸಿ ತಮ್ಮ ಭಕ್ತಿಭಾವವನ್ನು ಮೆರೆದರು.
ಜಾತ್ರಾ ಮಹೋತ್ಸವದಲ್ಲಿ ಮಸೂರು, ಕೆಂಚನಾಲ, ಬೆಳಂದೂರು, ಲಕ್ಕವಳ್ಳಿ, ಆಲುವಳ್ಳಿ, ಕಮದೂರು, ಮಾದಾಪುರ, ಹಾಲುಗುಡ್ಡೆ, ಬಾಳೂರು, ರಿಪ್ಪನ್ಪೇಟೆ, ಬೆನವಳ್ಳಿ, ಅರಸಾಳು, ಆಯನೂರು, ಹುಂಚ, ಆನಂದಪುರ, ಸಾಗರ, ಹೊಸನಗರ, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆದರು.
ಜಾತ್ರೆಯ ಅಂಗವಾಗಿ ಸಿಹಿತಿಂಡಿ, ತಿಂಡಿ-ತಿನಿಸು, ಆಟಿಕೆಗಳು, ಮಕ್ಕಳ ಅಟಿಕೆ ಸಾಮಗ್ರಿಗಳು, ಸ್ಟೇಷನರಿ ವಸ್ತುಗಳು ಸೇರಿದಂತೆ ವಿವಿಧ ಅಂಗಡಿಗಳು ಹಾಗೂ ವ್ಯಾಪಾರ ಮಳಿಗೆಗಳು ಜನರನ್ನು ಆಕರ್ಷಿಸಿದವು. ಹೂವು, ಹಣ್ಣು ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರವೂ ಜೋರಾಗಿತ್ತು.
ಇದೇ ವೇಳೆ ನವವಿವಾಹಿತ ನವಜೋಡಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾರಿಕಾಂಬ ದೇವಿಗೆ ಹರಕೆ ಸಲ್ಲಿಸಿ, ಸಂತಾನ ಭಾಗ್ಯ ಹಾಗೂ ಕುಟುಂಬದ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕೋಳಿ ಹರಾಜು ಪ್ರಕ್ರಿಯೆ ಕೂಡ ಭಾರಿ ಪೈಪೋಟಿಯಲ್ಲಿ ನಡೆಯಿತು ಪ್ರತಿಬಾರಿಯಂತೆ ಈ ಬಾರಿಯೂ ಹರಾಜು ಪ್ರಕ್ರಿಯೆಯಲ್ಲಿ ಭಕ್ತರು ಭಾಗವಹಿಸಿದರು.
ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆಯನ್ನು ಒದಗಿಸಿದ್ದರು.

















Leave a Reply