ರಿಪ್ಪನ್ ಪೇಟೆ : ಸರಸ್ವತಿ ಪೂಜೆ ಎಂದೂ ಕರೆಯಲ್ಪಡುವ ವಸಂತ ಪಂಚಮಿ, ಹಿಂದೂ ಪಂಚಾಂಗದ ಪ್ರಕಾರ ಆಧ್ಯಾತ್ಮಿಕವಾಗಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ವಸಂತಕಾಲದ ಆರಂಭವನ್ನು ಸೂಚಿಸುವಂತಹ ಹಬ್ಬವಾಗಿದೆ. ವಸಂತ ಪಂಚಮಿ ಹಬ್ಬವನ್ನು ಸರಸ್ವತಿ ಜಯಂತಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಗುವಿಗೆ ವಿದ್ಯಾರಂಭ ಸಂಸ್ಕಾರವನ್ನು ಮಾಡುವುದರ ಹಿಂದೆ ಒಂದು ಪ್ರಮುಖವಾದ ಕಾರಣವಿದೆ. ಮಗುವಿಗೆ ವಿದ್ಯಾರಂಭ ಸಂಸ್ಕಾರವನ್ನು ಮಾಡುವ ಮೂಲಕ ಆ ಮಗುವಿನ ಆಸಕ್ತಿಗಳನ್ನು ಜ್ಞಾನ ಮತ್ತು ಶಿಕ್ಷಣದ ಕಡೆಗೆ ಪ್ರೇರೇಪಿಸಲಾಗುತ್ತದೆ ಹಾಗೂ ಈ ಸಂಸ್ಕಾರದ ಮೂಲಕ ಮಗುವಿನಲ್ಲಿ ಸಾಮಾಜಿಕ ಮತ್ತು ನೈತಿಕ ಗುಣಗಳನ್ನು ಬೆಳೆಸುವಂತೆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರವನ್ನು ಬಾಲ್ಯದಿಂದಲೇ ನೀಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೋತ್ಥಾನ ಶಿಶುಮಂದಿರವು ವಿದ್ಯಾರಂಭ ಸಂಸ್ಕಾರ ಪೂಜೆಯನ್ನು ಆಯೋಜಿಸಿತ್ತು.
ಪಟ್ಟಣದ ರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ ಶಿಶುಗಳು ವಿದ್ಯಾರಂಭ ಪೂಜೆಯಲ್ಲಿ ಪೋಷಕರೊಂದಿಗೆ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿದ್ಯಾರಂಭ ಸಂಸ್ಕಾರದಲ್ಲಿ 4 ವರ್ಷ 4 ತಿಂಗಳು ಪೂರ್ಣಗೊಂಡ 9 ಮಕ್ಕಳು ಮತ್ತು ಅವರ ಪೋಷಕರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇಂದಿನ ಕಾರ್ಯಕ್ರಮದ ಪೌರೋಹಿತ್ಯವನ್ನು ವೇದಮೂರ್ತಿ ಚಂದ್ರಶೇಖರ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನದ ಶಿಶುಮಂದಿರದ ಅಧ್ಯಕ್ಷರು ಬ್ಯಾಂಕ್ ರತ್ನಾಕರ್, ಸದಸ್ಯರಾದ ದೇವದಾಸ್ ಆಚಾರ್, ರಾಮಚಂದ್ರ, ಬ್ಯಾಂಕ್ ಶಿವಾನಂದ, ಶಿಶುಮಂದಿರದ ಮಾತಾಜಿಗಳಾದ ಗಾಯಿತ್ರಿ ಮಾತಾಜಿ , ಸುಮಾ ಮಾತಾಜಿ ಮತ್ತು ಪೋಷಕರು ಉಪಸ್ಥಿತರಿದ್ದರು.















Leave a Reply