
ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ವಿರುದ್ಧ ರಸ್ತೆ ತಡೆದು ಪ್ರತಿಭಟನೆ
ಸಾಗರ: ತಾಲೂಕಿನ ಬೇಸೂರಿನಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ಹುಲಿದೇವರಬನದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಸರ್ಕಾರ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ವೇದಿಕೆ ಮುಖಂಡರು ಘೋಷಿಸಿದರು.
ಹೋರಾಟದ ಮೊದಲ ಹಂತವಾಗಿ ಶಾಲಾ ಮಕ್ಕಳೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. “ಅಣುಸ್ಥಾವರ ಬೇಡ, ಬದುಕು ಬೇಕು” ಎಂಬ ಘೋಷಣೆಗಳ ನಡುವೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಪರ ಧ್ವನಿ ಎತ್ತಿದರು.

ಕೊಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಕ್ಕಳು “ಬೇಸೂರು ಉಳಿಸುವ ಪ್ರತಿಜ್ಞೆ” ಸ್ವೀಕರಿಸಿದರು. ಈ ವೇಳೆ ಹೋರಾಟಗಾರರು ಅಣು ವಿದ್ಯುತ್ ಸ್ಥಾವರದಿಂದ ಮಲೆನಾಡಿನ ಪರಿಸರ, ಜಲಮೂಲಗಳು ಹಾಗೂ ಭವಿಷ್ಯದ ಪೀಳಿಗೆಗೆ ಎದುರಾಗಬಹುದಾದ ಅಪಾಯಗಳ ಕುರಿತು ಮಕ್ಕಳಿಗೆ ಸರಳವಾಗಿ ವಿವರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ಬಿ.ಎ. ಇಂದುಧರ ಗೌಡ ಬೇಸೂರು, ಮುಖಂಡರಾದ ನವೀನ ಗೌಡ ಗಿಣಿವಾರ, ಮಲೆನಾಡು ರೈತ ಹೋರಾಟ ವೇದಿಕೆಯ ಸಂಚಾಲಕ ತೀ.ನ. ಶ್ರೀನಿವಾಸ್ ಹಾಗೂ ದಿನೇಶ್ ವಹಿಸಿದ್ದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರು, “ಮಲೆನಾಡು ಈಗಾಗಲೇ ಹಲವು ಅಭಿವೃದ್ಧಿ ಯೋಜನೆಗಳಿಂದ ಭೂಮಿ ಕಳೆದುಕೊಂಡು ಸಂಕಷ್ಟ ಅನುಭವಿಸಿದೆ. ಇದೀಗ ಅಣು ಸ್ಥಾವರ ಯೋಜನೆಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರಿಸುವ ಭೀತಿ ಎದುರಾಗಿದೆ. ಪರಿಸರ ಮತ್ತು ಜನಜೀವನಕ್ಕೆ ಅಪಾಯ ಉಂಟುಮಾಡುವ ಯಾವುದೇ ಯೋಜನೆಯನ್ನು ಮಲೆನಾಡಿನ ಜನರು ಒಪ್ಪುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕೃತವಾಗಿ ಕೈಬಿಟ್ಟಿರುವ ಬಗ್ಗೆ ಲಿಖಿತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಹೋರಾಟಕ್ಕೆ ಹೈಕೋರ್ಟ್ ವಕೀಲರ ಬೆಂಬಲವೂ ದೊರೆಯಲಿದೆ ಎಂದು ತಿಳಿಸಿದರು.
ಮುಂದಿನ ಹೋರಾಟದ ಕಾರ್ಯಕ್ರಮಗಳು:
ಮೇ 20: ಬೇಸೂರು ಬಸವಣ್ಣ ದೇವಸ್ಥಾನದಿಂದ ಸಾಗರ ಎಸಿ ಕಚೇರಿವರೆಗೆ ಪಾದಯಾತ್ರೆ
ಮೇ 21 ರಿಂದ 25: ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಸರಣಿ ಧರಣಿ ಸತ್ಯಾಗ್ರಹ
ಮೇ 27: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಜನಾಂದೋಲನ ಮತ್ತು ಪ್ರತಿಭಟನಾ ಸಮಾವೇಶ
“ಇಂದಿನ ಅಲಕ್ಷ್ಯ ಮುಂದಿನ ವಿನಾಶಕ್ಕೆ ಕಾರಣವಾಗಬಹುದು” ಎಂದು ಎಚ್ಚರಿಸಿರುವ ಹೋರಾಟ ವೇದಿಕೆ, ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದೆ.
















Leave a Reply