
ಹೊಸನಗರ: ಮಲೆನಾಡು-ಕರಾವಳಿ ರೈಲು ಸಂಪರ್ಕ ಯೋಜನೆಯಲ್ಲಿ ಹೊಸನಗರ ತಾಲ್ಲೂಕನ್ನು ಸೇರಿಸಿ ನ್ಯಾಯ ಒದಗಿಸಬೇಕು. ಇಲ್ಲವಾದರೆ ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೊಸನಗರ ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ತಹಶೀಲ್ದಾರ್ ಭರತ್ರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲು ಮಾರ್ಗ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (DPR) ತಯಾರಿಸಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 332 ಕಿಲೋಮೀಟರ್ ಉದ್ದದ ಈ ಯೋಜನೆಗೆ ಅಂದಾಜು 3300 ಕೋಟಿ ರೂ. ವೆಚ್ಚ ನಿರ್ಧರಿಸಲಾಗಿದೆ ಎಂದು ಹೇಳಿದರು.
2018ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಸದಾನಂದಗೌಡರ ಅವಧಿಯಲ್ಲಿಯೇ ಹೊಸನಗರವನ್ನು ಈ ಯೋಜನೆಗೆ ಸೇರಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಆ ವೇಳೆ ಪರಿಶೀಲಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಅರಸಾಳು–ರಿಪ್ಪನ್ಪೇಟೆ–ತೀರ್ಥಹಳ್ಳಿ–ಶೃಂಗೇರಿ ಮಾರ್ಗದ ಚರ್ಚೆಗಳು ನಡೆಯುತ್ತಿದ್ದು, ಹೊಸನಗರವನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ಎಂದು ಆರೋಪಿಸಿದರು.
ಹೊಸನಗರವು ತಾಲ್ಲೂಕು ಕೇಂದ್ರವಾಗಿದ್ದು, ರಾಜ್ಯದ ಅಭಿವೃದ್ಧಿಗಾಗಿ ಅನೇಕ ತ್ಯಾಗಗಳನ್ನು ಮಾಡಿದ ಪ್ರದೇಶವಾಗಿದೆ. ಮಲೆನಾಡಿನ ಜನತೆಗೆ ಬೆಳಕು ನೀಡಲು ಸರ್ವಸ್ವ ಕಳೆದುಕೊಂಡ ಈ ಭಾಗದ ತ್ಯಾಗವನ್ನು ಮರೆಯದೇ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈಲು ಮಾರ್ಗವು ಅರಸಾಳು – ರಿಪ್ಪನ್ಪೇಟೆ – ಹೊಸನಗರ – ತೀರ್ಥಹಳ್ಳಿ ಮೂಲಕ ಹಾದು ಹೋಗುವಂತೆ ನಕ್ಷೆ ರೂಪಿಸಬೇಕು. ದಶಕಗಳಿಂದಾಗಿರುವ ಅನ್ಯಾಯವನ್ನು ಸರಿಪಡಿಸಿ, ಹೊಸನಗರಕ್ಕೂ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು. ಹೊಸನಗರವನ್ನು ಯೋಜನೆಯಿಂದ ಹೊರಗಿಡುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇದೇ ವೇಳೆ, ಸಲ್ಲಿಸಿರುವ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ತಹಶೀಲ್ದಾರ್ರನ್ನು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎನ್.ಆರ್. ದೇವಾನಂದ್, ಬಿ.ಎಸ್. ಸುರೇಶ್, ವಿಜೇಂದ್ರ ಶೇಟ್, ಹರೀಶ್, ಪ್ರಕಾಶ್ ಶೆಟ್ಟಿ, ಲೋಕೇಶ್, ವಾದಿರಾಜ್ ಭಟ್, ಗುರುರಾಜ್, ಸಂತೋಷ್ ಹೋಟೆಲ್ ರವಿ, ವಿಠಲರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


















Leave a Reply