
ಹೊಸನಗರ: ಆನ್ಲೈನ್ ಮೂಲಕ ನಡೆಯುತ್ತಿರುವ ಔಷಧಿ ಮಾರಾಟ, ಔಷಧಿಗಳ ದರ ವ್ಯತ್ಯಾಸ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಸರಬರಾಜು ವಿರೋಧಿಸಿ ಮೇ 20ರಂದು ಹೊಸನಗರ ತಾಲ್ಲೂಕಿನ ಎಲ್ಲಾ ಔಷಧಿ ಅಂಗಡಿಗಳನ್ನು ಬಂದ್ ಮಾಡಲು ಕರೆ ನೀಡಲಾಗಿದೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಎನ್. ದತ್ತಾತ್ರೇಯ ಉಡುಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೇ 20ರಂದು ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 10 ಗಂಟೆಯವರೆಗೆ ಹೊಸನಗರ ತಾಲ್ಲೂಕಿನ ಎಲ್ಲಾ ಔಷಧಿ ಅಂಗಡಿಗಳು ಬಂದ್ ಆಗಲಿವೆ ಎಂದು ಹೇಳಿದರು.

ದೇಶದಾದ್ಯಂತ ಅಂಗಡಿಗಳನ್ನು ಹೊರತುಪಡಿಸಿ ಆನ್ಲೈನ್ ಮೂಲಕ ಔಷಧಿಗಳ ಮಾರಾಟ ಹೆಚ್ಚಾಗುತ್ತಿದೆ. ಜೊತೆಗೆ ವಿವಿಧ ಕಡೆಗಳಲ್ಲಿ ಔಷಧಿಗಳ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಕಳಪೆ ಗುಣಮಟ್ಟದ ಔಷಧಿಗಳ ಸರಬರಾಜು ಕೂಡ ನಡೆಯುತ್ತಿದೆ. ಇಂತಹ ಅನ್ಯಾಯಗಳನ್ನು ತಡೆಯಲು ಒಂದು ದಿನದ ಮಟ್ಟಿಗೆ ಬಂದ್ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ನಾವು ನಮ್ಮ ಔಷಧಿ ಅಂಗಡಿಗಳನ್ನು ಉಳಿಸಿಕೊಳ್ಳಬೇಕಾದರೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನ್ಲೈನ್ ಸೇವೆ, ದರ ವ್ಯತ್ಯಾಸ ಮತ್ತು ಕಳಪೆ ಗುಣಮಟ್ಟದ ಔಷಧಿ ಸರಬರಾಜನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಈ ಬಂದ್ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

















Leave a Reply