
ಹೊಸನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಬದಿಯಲ್ಲೇ ಅನಧಿಕೃತವಾಗಿ ಫುಡ್ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದ್ದವು ಸಾರ್ವಜನಿಕರ ಹಾಗೂ ಕ್ರೀಡಾಭಿಮಾನಿಗಳಿಗೆ ತೊಂದರೆ ಉಂಟು ಮಾಡುವ ಅನಧಿಕೃತ ಫುಡ್ಕೋರ್ಟ್ ನಿರ್ಮಾಣ ಕಾರ್ಯಕೈಗೊಂಡಿದ್ದು ಸರಿಯಲ್ಲ ಎಂದು ಎಂ.ಎನ್. ಸುಧಾಕರ್ ಎಂಬುವವರು ಬೆಂಗಳೂರು ಹೈಕೋರ್ಟ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ನ್ಯಾಯಾಲಯವು ಯಾವುದೇ ಮುಂದಿನ ಆದೇಶದ ವರೆಗೆ ತಾತ್ಕಾಲಿಕ ತಡೆ ನೀಡಿ ಫುಡ್ಕೋರ್ಟ್ ನಿರ್ಮಾಣ ಮಾಡಬಾರದು ಎಂದು ಪ್ರಕರಣದ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದೆ.
ಈ ಕುರಿತು ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಹೊಸನಗರ ತಹಶೀಲ್ದಾರರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಶಾಸಕ ಬೇಳೂರು ಗೋಪಾಲಕೃಷ್ಣ ವಿಶೇಷವಾಗಿ ಮುತುವರ್ಜಿ ವಹಿಸಿ 30 ಲಕ್ಷ ರೂ ಅನುದಾನದಲ್ಲಿ ಅವರೇ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.ಶಾಸಕರ ವಿಶೇಷ ಅನುದಾನದ ಅಡಿಯಲ್ಲಿ ಈ ಫುಡ್ ಕೋರ್ಟನ್ನು ಮಾಡಲಾಗುತ್ತಿದ್ದು ಅನೇಕ ವಿರೋಧಗಳ ನಡುವೆಯೂ ಶಂಕುಸ್ಥಾಪನೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾಡಿದ್ದರು. ಸಾರ್ವಜನಿಕರಿಗೆ ತೊಂದರೆಯಾಗುವ ಮತ್ತು ವಾಹನ ಸಂಚಾರ ಅಡೆತಡೆಯಾಗುವಂತಹ ಹಾಗೂ ಅಪಘಾತ ಸಾಗುವ ಆತಂಕವನ್ನು ಅನೇಕರು ಹೊರಹಾಕಿದ್ದರು. ಅನೇಕ ರಾಜ್ಯಪತ್ರಿಕೆಗಳಲ್ಲೂ ನಿರಂತರವಾಗಿ ಸುದ್ದಿಗಳು ಪ್ರಕಟಗೊಂಡಿತು. ಆದರೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಿರೋಧದ ನಡುವೆಯೇ ಶಂಕುಸ್ಥಾಪನೆ ಮಾಡಿ ಕಾಮಗಾರಿ ಪ್ರಾರಂಭಿಸಿದ್ದರು.

ಸಾರ್ವಜನಿಕರ ದೂರು ; ತಹಶೀಲ್ದಾರ್ ಗೆ ಪಿಡಬ್ಲ್ಯೂಡಿ ಪತ್ರ : ರಾಷ್ಟ್ರೀಯ ಹೆದ್ದಾರಿ 766C (ಬೈಂದೂರು – ರಾಣೇಬೆನ್ನೂರು ಸೆಕ್ಷನ್) ಕಿಲೋಮೀಟರ್ 88.100 ರ ರಸ್ತೆಯ ಎಡಭಾಗದಲ್ಲಿ ನಿಯಮಬಾಹಿರವಾಗಿ ಫುಡ್ಕೋರ್ಟ್ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ಇಲಾಖೆಗೆ ದೂರವಾಣಿ ಮೂಲಕ ಸರಣಿ ದೂರುಗಳನ್ನು ನೀಡಿದ್ದರು. ಈ ದೂರುಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಅಧಿಕಾರಿಗಳ ಪರಿಶೀಲನೆ ವೇಳೆ, ರಸ್ತೆಯ ಎಡಭಾಗದ ಚರಂಡಿಯ ಅಂಚಿನಲ್ಲೇ ಫುಡ್ಕೋರ್ಟ್ಗಾಗಿ ಪೇವರ್ ಟೈಲ್ಸ್ ಅಳವಡಿಸಿರುವುದು ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೆಗೆದಿರುವುದು ಪತ್ತೆಯಾಗಿದೆ.

ಕೇಂದ್ರ ಭೂಸಾರಿಗೆ ಸಚಿವಾಲಯದ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ ಕನಿಷ್ಠ 40 ಮೀಟರ್ ದೂರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬೇಕಿರುತ್ತದೆ. ಆದರೆ, ಈ ಸ್ಥಳದಲ್ಲಿ ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೇ, ರಸ್ತೆಗೇ ತೀರಾ ಹೊಂದಿಕೊಂಡಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೆದ್ದಾರಿಯ ತೀರಾ ಹತ್ತಿರದಲ್ಲೇ ಇಂತಹ ವಾಣಿಜ್ಯ ಮಳಿಗೆಗಳು ತಲೆಎತ್ತುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದ್ದು, ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಕೇಂದ್ರ ಭೂಸಾರಿಗೆ ಸಚಿವಾಲಯದ ನಿಯಮಗಳ ಪ್ರಕಾರ ಪೂರ್ವಾನುಮತಿ ಪಡೆಯದೇ ನಡೆಯುತ್ತಿರುವ ಈ ಅನಧಿಕೃತ ನಿರ್ಮಾಣ ಕಾರ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೊಸನಗರ ತಹಶೀಲ್ದಾರರಿಗೆ ಕೋರಲಾಗಿದೆ. ಈ ಪತ್ರದ ಪ್ರತಿಯನ್ನು ಅಗತ್ಯ ಕ್ರಮಕ್ಕಾಗಿ ಹೊಸನಗರ ತಾಲ್ಲೂಕು ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೂ ರವಾನಿಸಲಾಗಿದೆ.

















Leave a Reply