ಬೆಂಗಳೂರು: ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರೋಧಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಂಗಳೂರು ನಗರದಲ್ಲಿ 2022 ರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಮುಷ್ಟಿಯಲ್ಲಿ ಸಿಲುಕಿ ಕಿರುಕುಳ ಅನುಭವಿಸುತ್ತಿದ್ದ ವಾಹನ ಚಾಲಕರನ್ನು ಟೋಯಿಂಗ್ ಮಾಫಿಯಾ ದಿಂದ ರಕ್ಷಣೆ ಮಾಡಲಾಗಿತ್ತು.
ಒಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಹಾಗೂ ಅಮಾನುಷವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಡೆಸಿಕೊಂಡ ಘಟನೆಯ ಪರಿಣಾಮವಾಗಿ ಟೊಯಿಂಗ್ ಪದ್ಧತಿಯನ್ನು ಯಾವ ಮುಲಾಜಿಗೂ ಒಳಗಾಗದೆ, ಎಷ್ಟೇ ಒತ್ತಡ ಬಂದರೂ ನಿಷೇಧ ಮಾಡಿದ್ದೆ.
ಸಾರ್ವಜನಿಕರನ್ನು ಅಮಾನುಷವಾಗಿ ನಡೆಸಿಕೊಂಡು, ಕಿರುಕುಳ ನೀಡುತ್ತಿದ್ದ ಟೋಯಿಂಗ್ ಪದ್ಧತಿಯನ್ನು ನಿಷೇಧ ಮಾಡಬೇಕು ಎಂದು, ಹಲವಾರು NGO ಗಳೂ ಹಾಗೂ ಸಂಘ ಸಂಸ್ಥೆಗಳಿಂದಲೂ ಒತ್ತಾಯ ಬಂದಿತ್ತು.

ಅದರ ಇದೀಗ, ತನ್ನ ಎಡಬಿಡಂಗಿ ಆರ್ಥಿಕ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರಕಾರ ಮತ್ತೆ ಟೋಯಿಂಗ್ ಅನಿಷ್ಟ ಪದ್ಧತಿಯನ್ನು ಸಾರ್ವಜನಿಕರ ಮೇಲೆ ಹೇರಲು ನಿರ್ಧರಿಸಿರುವುದನ್ನು ಬಲವಾಗಿ ಖಂಡಿಸುತ್ತೇನೆ.
ಟೋಯಿಂಗ್ ಮಾಫಿಯಾ: ಬೆಂಗಳೂರು ನಾಗರಿಕರನ್ನು ಮತ್ತೆ ಟೋ ಯಿಂಗ್ ಮಾಫಿಯಾ ಕಪಿ ಮುಷ್ಟಿಗೆ ತಳ್ಳುತ್ತಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ಮುಂದುವರೆದ ಜನ ವಿರೋದೀ ನೀತಿಯಾಗಿದೆ.
ರಾಜ್ಯ ಸರಕಾರ ಸುಗಮ ಸಂಚಾರದ ಹೆಸರಿನಲ್ಲಿ ಅತಿ ಹೆಚ್ಚಿನ ಶುಲ್ಕವನ್ನು ನಿಗದಿಪಡಿಸಿ ಲೂಟಿಗೆ ಇಳಿದಿದೆ.
ನಗರದಲ್ಲಿ ತಾಂತ್ರಿಕವಾಗಿ ಅತಿ ಸೂಕ್ಷ್ಮವಾಗಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದ್ದು, ಟೋಯಿಂಗ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಹಾನಿ ಗೊಳಗಾಗಿ ನಷ್ಟ ಹೊಂದುವ ಸಂಭವಗಳು ಹೆಚ್ಚಾಗುತ್ತದೆ.
ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಸಮಸ್ಯೆಯನ್ನು ಬಗೆಹರಿಸದೆ, ಈ ರೀತಿಯ ಜನವಿರೋಧಿ ನೀತಿಯನ್ನು ಹೇರಲು ತೊಡಗಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಸರಕಾರ ಈ ಕೂಡಲೇ ಟೊಯಿಂಗ್ ಪದ್ಧತಿಯನ್ನು ಹೇರುವ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಹಾಗೂ ತನ್ನ ಆರ್ಥಿಕ ದುಸ್ಥಿತಿ ಗೆ ಪರಿಹಾರ ಕಂಡುಕೊಳ್ಳಲು ಬೇರೆಯಾದ ಪರಿಹಾರ ಮಾರ್ಗಗಳನ್ನು ಕಂಡು ಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

















Leave a Reply