ಹುಂಚ : ಪ್ರಾಚೀನ ಹಾಗೂ ಅತಿಶಯ ಶ್ರೀಕ್ಷೇತ್ರ ಹುಂಚದಲ್ಲಿ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ನಡೆಯುತ್ತಿರುವ ವಾರ್ಷಿಕ ರಥಯಾತ್ರಾ ಮಹೋತ್ಸವದ ದ್ವಿತೀಯ ದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಿತ್ಯವಿಧಿಗಳೊಂದಿಗೆ ಶ್ರೀಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ, ಕಲಶಾರಾಧನೆ ಹಾಗೂ ಪೂಜಾ ವಿಧಿಗಳು ನೆರವೇರಿದವು.

ಶ್ರೀಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗ ಸನ್ನಿಧಿಗಳಲ್ಲಿ ವಿಶೇಷ ಅಲಂಕಾರ ಪೂಜೆಗಳು ನಡೆಯಿತು. ಗ್ರಾಮ ಹಾಗೂ ಸುತ್ತಮುತ್ತಲಿನ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.
ಪ್ರಾತಃಕಾಲದಲ್ಲಿ ಕುಮುದ್ವತಿ ತೀರ್ಥದಿಂದ ಜಲವನ್ನು ರಜತ ಕಲಶದಲ್ಲಿ ತಂದು ಐಶ್ವರ್ಯ ಗಜರಾಣಿಯ ಮೇಲೆ ಏರಿಸಿ ಶ್ರೀಕ್ಷೇತ್ರಕ್ಕೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಶ್ರೀ ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು ಹಾಗೂ ಹುಂಚ ಜೈನ ಸಮಾಜದ ಭಕ್ತರು ಭಾಗವಹಿಸಿದ್ದರು.
ರಾತ್ರಿ ವೇಳೆ ಸಾಂಪ್ರದಾಯಿಕ ವೈಭವದೊಂದಿಗೆ ಸಿಂಹವಾಹನೋತ್ಸವ ನೆರವೇರಿತು. ಪೂಜೆ ಮತ್ತು ಭೋಜನ ಸೇವಾಕರ್ತರಾಗಿ ಮೀನಾದೇವಿ ರಾರಾ ಹಾಗೂ ಪವನಕುಮಾರ್ ರಾರಾ ಸಹೋದರರು (ತಿನ್ಸುಕಿಯಾ, ಅಸ್ಸಾಂ) ಶ್ರೀಕ್ಷೇತ್ರಕ್ಕೆ ಆಗಮಿಸಿ ಭಕ್ತಿಭಾವದಿಂದ ಸೇವೆ ಸಲ್ಲಿಸಿದರು.
ಪೂಜಾ ವಿಧಿಗಳನ್ನು ಪುರೋಹಿತರಾದ ಶ್ರೀ ಪದ್ಮರಾಜ್ ಇಂದ್ರ ಹಾಗೂ ಸಹ ಪುರೋಹಿತರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಶ್ರೀಕ್ಷೇತ್ರವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿ ಭಕ್ತರ ಗಮನ ಸೆಳೆಯಿತು.














Leave a Reply