ತಾಲೂಕಿನ ಬೆಳ್ಳೂರು -ಬಿದರಹಳ್ಳಿ -ನೀರುತೊಟ್ಟಿಲು ಶಾಲೆಗಳಿಗೆ ಪ್ರಶಸ್ತಿ ಗರಿ
ಎನ್. ಕಾರ್ತಿಕ್ ಕೌಂಡಿನ್ಯ ✍️
ಹೊಸನಗರ : ಪ್ರೌಢಶಾಲೆ, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ತಾಲೂಕಿನ ಬೆಳ್ಳೂರು ಸರ್ಕಾರಿ ಪ್ರೌಢಶಾಲೆ, ಬಿದರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆ ಉತ್ತಮ ಎಸ್ಡಿಎಂಸಿಯಾಗಿ ಪುರಸ್ಕಾರಕ್ಕೆ ಭಾಜನವಾಗಿವೆ.

ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಪರಿಸರವನ್ನು ಬಲಪಡಿಸಲು ಶಾಲಾಭಿವೃದ್ಧಿ ಸಮಿತಿ ದಾನಿಗಳ ಮುಖಾಂತರ ಹಲವಾರು ಸೌಲಭ್ಯಗಳನ್ನು ಪಡೆದಿರುತ್ತಾರೆ. 2024-25ನೇ ಸಾಲಿನಲ್ಲಿ ನಡೆಸಿರುವ ಚಟುವಟಿಕೆಗಳನ್ನು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಸಲ್ಲಿಸಬೇಕಿತ್ತು. ಹೀಗೆ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಕ್ಲಸ್ಟರ್,ತಾಲೂಕು ಹಾಗೂ ಜಿಲ್ಲಾ ಹಂತದ ಎರಡು ತಂಡಗಳ ಸಮಗ್ರ ಪರಿಶೀಲನೆ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆಯಾದ ಶಾಲೆಗಳಿಗೆ ಶಿಕ್ಷಣ ಇಲಾಖೆಯ ವತಿಯಿಂದ ಪ್ರಶಸ್ತಿ ಮತ್ತು ನಗದು ಬಹುಮಾನವು ಕೂಡ ಘೋಷಿಸಲಾಗಿದೆ.
ಬಿದರಹಳ್ಳಿ ಒಂದು ಮಾದರಿ ಶಾಲೆ

ಅಮೃತ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಬಿದರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಮಾದರಿ ಶಾಲೆಯಾಗಿದೆ. ಊರಿನ ಗ್ರಾಮಸ್ಥರು ,ಹಳೆ ವಿದ್ಯಾರ್ಥಿಗಳ ಸಹಕಾರ,ಎಸ್.ಡಿ.ಎಂ.ಸಿ ಸದಸ್ಯರ ಶ್ರಮ -ಶಿಕ್ಷಕರ ಕಾರ್ಯವೈಕರಿ ಯಿಂದ ಈ ಶಾಲೆಯು ಒಂದು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.
ಸುಸಜ್ಜಿತ ಶಾಲಾ ಕೊಠಡಿಗಳು, ಕಂಪ್ಯೂಟರ್ ತರಗತಿ, ಸ್ಮಾರ್ಟ್ ಕ್ಲಾಸ್, ನುರಿತ ಶಿಕ್ಷಕ ವೃಂದ, ಗುಣಮಟ್ಟದ ಶಿಕ್ಷಣ, ಅಷ್ಟೇ ಅಲ್ಲ ಈ ಶಾಲೆಗೆ ಭೇಟಿ ನೀಡಿದರೆ ನಾವೆಲ್ಲೋ ಒಂದು ಉದ್ಯಾನವನ, ಒಂದು ಮ್ಯೂಸಿಯಂಗೆ ಭೇಟಿ ನೀಡಿದ ಅನುಭವ ಉಂಟಾಗುತ್ತದೆ. ಸ್ವಚ್ಛಂದವಾದ ಪರಿಸರ, ಶಾಲಾ ಆವರಣದಲ್ಲಿ ಸಾಂಸ್ಕೃತಿಕ ವೈಭವವನ್ನು ಸಾರುವ ಅಂತಹ ಕಲಾ ಕೃತಿಗಳು, ಮಕ್ಕಳಿಗೆ ನೈತಿಕ ಪಾಠವನ್ನು ಕಲಿಸುವಂತಹ ಒಂದು ಶಿಕ್ಷಣದ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಮಾಡಲಾಗಿದ್ದು ಎಲ್ಲರಿಗೂ ಪ್ರೇರಣೆ ನೀಡುವಂತಹ ಮಾದರಿ ಶಾಲೆ ಎಂದರೆ ತಪ್ಪಾಗಲಾರದು. ಸರ್ವ ಸದಸ್ಯರ ಮತ್ತು ಶಿಕ್ಷಕರ ಪರಿಶ್ರಮದಿಂದ ಉತ್ತಮ ಎಸ್ ಡಿ ಎಂ ಸಿ ಪ್ರಶಸ್ತಿ ಲಭಿಸಿದೆ.ನಿವೃತ್ತ ಮುಖ್ಯಶಿಕ್ಷಕ ದೇವೇಂದ್ರಪ್ಪ ಮತ್ತು ಶಿಕ್ಷಕರಾದ ದಿನೇಶ್, ಮಧುಕರ್ ಸೇರಿದಂತೆ ಎಲ್ಲಾ ಕ್ರಿಯಾಶೀಲ ಶಿಕ್ಷಕವೃಂದದ ಶ್ರಮ ಇದರ ಹಿಂದೆ ಅಡಗಿದೆ.

“ಶಿಕ್ಷಕರು, ಗ್ರಾಮಸ್ಥರು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ. ಇದು ನಮಗೆ ಹೆಮ್ಮೆ ಹಾಗೂ ಪ್ರೇರಣೆ.”
– ಉಮೇಶ್, ಅಧ್ಯಕ್ಷರು, ಎಸ್ಡಿಎಂಸಿ, ಬಿದರಹಳ್ಳಿ ಹಿರಿಯ ಪ್ರಾಥಮಿಕ ಶಾಲೆ
ಕುಗ್ರಾಮ, ಅಡವಿಯೊಳಗಿನ ಬೆಳ್ಳೂರು ಪ್ರೌಢಶಾಲೆಯ ಸಾಧನೆ

ದಟ್ಟ ಅರಣ್ಯದ ಮಧ್ಯೆ ನೆಲೆಸಿರುವ ಸರ್ಕಾರಿ ಪ್ರೌಢಶಾಲೆ ಬೆಳ್ಳೂರು, ಗ್ರಾಮೀಣ ಭಾಗದಲ್ಲೇ ಮಾದರಿ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಿದೆ. ಸುಸಜ್ಜಿತ ತರಗತಿಗಳು, ನುರಿತ ಶಿಕ್ಷಕರು ಮತ್ತು ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಿದೆ. ಹಸಿರುಮಯ ಪರಿಸರ ಹಾಗೂ ಕಲಾತ್ಮಕ ಆವರಣ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳೊಂದಿಗೆ ಸಮಗ್ರ ಶಿಕ್ಷಣ ನೀಡುತ್ತಿದೆ. ಉತ್ತಮ ಎಸ್ ಡಿ ಎಂ ಸಿ ಹೊಂದಿರುವ ಶಾಲೆಯು ಶಿಕ್ಷಕ ವೃಂದ ಮತ್ತು ಸಮಿತಿಯ ಸಮನ್ವಯದಿಂದ ಗ್ರಾಮಸ್ಥರ, ಹಳೆ ವಿದ್ಯಾರ್ಥಿಗಳ ಸಹಕಾರ ದಿಂದ ಶಾಲೆಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಮುಖ್ಯಶಿಕ್ಷಕ ಸೋಮಶೇಖರ್ ಸೇರಿದಂತೆ ಶಿಕ್ಷಕವೃಂದದವರ ಕಾಳಜಿ ಈ ಸಾಧನೆಯ ಭಾಗವಾಗಿದೆ.

“ಎಲ್ಲರ ಸಹಭಾಗಿತ್ವದಿಂದ ಪ್ರಶಸ್ತಿ ದೊರಕಿದೆ. ಮುಂದೆಯೂ ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತೇವೆ.”
– ದಿನೇಶ್, ಅಧ್ಯಕ್ಷರು, ಎಸ್ಡಿಎಂಸಿ, ಬೆಳ್ಳೂರು
ನಕ್ಸಲ್ ಬಾಧಿತ ಪ್ರದೇಶ, ಅಡವಿಯೊಳಗಿನ ನೀರುತೊಟ್ಟಿಲು ಕಿರಿಯರ ಶಾಲೆಗೆ ಪ್ರಶಸ್ತಿ
ತಾಲೂಕಿನ ದಟ್ಟ ಅರಣ್ಯ ಪ್ರದೇಶವಿರುವ , ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಯಡೂರುಗದೆ ಭಾಗದ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆಯೂ ಇಡೀ ಶೈಕ್ಷಣಿಕ ವರ್ಷ ಕ್ಕೆ ಬೇಕಾಗುವಷ್ಟು ನೋಟ್ ಪುಸ್ತಕಗಳು,ಶಾಲಾ ಬ್ಯಾಗ್,ನೀರಿನ ಬಾಟಲಿ, ಸ್ಯಾಂಡಲ್ಸ್,ಫಿಲ್ಟರ್,ಗುಣಮಟ್ಟದ ರಬ್ಬರ್ ಮ್ಯಾಟ್,ಸ್ಮಾರ್ಟ್ ಟಿವಿ,ಪ್ರಯಾಣ ವ್ಯವಸ್ಥೆ, ಕಲಿಕೋಪಕರಣ,ಸೌಂಡ್ ಸಿಸ್ಟಮ್, ಕೊಡೆ,ರೈನ್ ಕೋಟ್, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ, ಪೌಷ್ಠಿಕ ವನ ಹೀಗೆ ಎಸ್ ಡಿಎಂಸಿ ದಾನಿಗಳ ಸಹಕಾರದಿಂದ ಮಕ್ಕಳಿಗೆ ಸೌಲಭ್ಯ ದೊರಕುವಂತೆ ಮಾಡಿದೆ.ಕೇವಲ 11 ಮಕ್ಕಳು ಒಂದರಿಂದ ನಾಲ್ಕನೇ ತನಕ ವ್ಯಾಸಂಗ ಮಾಡುತ್ತಿದ್ದು ಓರ್ವ ಕ್ರಿಯಾಶೀಲ ಶಿಕ್ಷಕ ಶರವಣ ಎಸ್.ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಣಿ ಡ್ಯಾಂ ಆಚೆಯ ಮೂಲಸೌಕರ್ಯ ಕೊರತೆಯ ನಡುವೆ ಕಾರ್ಯನಿರ್ವಹಿಸುತ್ತಿರುವ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿ ಪಡೆದಿರುವುದು ವಿಶೇಷ ಸಾಧನೆ. ಗ್ರಾಮಸ್ಥರ ಕಾಳಜಿ ಹಾಗೂ ಮುಖ್ಯ ಶಿಕ್ಷಕ ಶರವಣ ಅವರ ಅವಿರತ ಪರಿಶ್ರಮವೇ ಪ್ರಮುಖ ಕಾರಣವಾಗಿದೆ.
-ರೇಖಾ ಪ್ರಭಾಕರ್, CRP
















Leave a Reply