ಶಿವಮೊಗ್ಗ : ಮಲೆನಾಡಿನ ಪುಟ್ಟ ಸರ್ಕಾರಿ ಶಾಲೆಯೊಂದು ಇಂದು ರಾಷ್ಟ್ರಮಟ್ಟದಲ್ಲಿ ಹೆಮ್ಮೆಯ ಸ್ಥಾನ ಪಡೆದಿದೆ. ಹುಂಚದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಅವರು 2026ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ದೇಶಾದ್ಯಂತ ಆಯ್ಕೆಯಾದ 48 ಶಿಕ್ಷಕರಲ್ಲಿ ಒಬ್ಬರು ಹಾಗೂ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕಿಯಾಗಿದ್ದಾರೆ.
ಶಿಕ್ಷಕರ ದಿನಾಚರಣೆಯಾದ ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

30 ವರ್ಷಗಳ ಸೇವೆಗೆ ರಾಷ್ಟ್ರೀಯ ಮನ್ನಣೆ: ಮೂರು ದಶಕಗಳಿಗೂ ಅಧಿಕ ಬೋಧನಾ ಅನುಭವ ಹೊಂದಿರುವ ರತ್ನಕುಮಾರಿ ಅವರು ಕಳೆದ 24 ವರ್ಷಗಳಿಂದ ಸಮಟಗಾರು ಶಾಲೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ, ಪರಿಸರದೊಂದಿಗೆ ಪಾಠ, ಆಟದ ಮೂಲಕ ಕಲಿಕೆ, ಚಟುವಟಿಕೆ ಆಧಾರಿತ ಬೋಧನೆ ಹಾಗೂ ಇಂಗ್ಲಿಷ್ ಸಂವಹನ ಎಂಬ ನಾವೀನ್ಯತೆಯ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ.
ಇದೇ ಸೃಜನಾತ್ಮಕ ಬೋಧನಾ ಮಾದರಿಯು ಅವರಿಗೆ ರಾಷ್ಟ್ರಮಟ್ಟದ ಗೌರವ ತಂದುಕೊಟ್ಟಿದೆ.
ಸರ್ಕಾರಿ ಶಾಲೆಯ ಮೇಲಿನ ವಿಶ್ವಾಸ ಹೆಚ್ಚಿಸಿದ ಶಿಕ್ಷಕಿ:
ಸಮಟಗಾರು ಶಾಲೆಯಲ್ಲಿ 56 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿದ್ದಾರೆ. ಹೆಚ್ಚಿನ ಮಕ್ಕಳು 10-12 ಕಿಲೋ ಮೀಟರ್ ನಿಂದ ನೆರೆಯ ಗ್ರಾಮಗಳಿಂದ ಬರುತ್ತಿರುವುದರಿಂದ ದಾನಿಗಳ ನೆರವಿನಿಂದ ಎರಡು ಶಾಲಾ ವ್ಯಾನ್ಗಳ ವ್ಯವಸ್ಥೆ ಮಾಡಲಾಗಿದೆ.
ರತ್ನಕುಮಾರಿ ಅವರ ಮಕ್ಕಳಿಬ್ಬರು ಇದೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರ ಸಹೋದ್ಯೋಗಿಗಳ ಮಕ್ಕಳೂ ಇದೇ ಶಾಲೆಯಲ್ಲಿ ಓದಿದ್ದು, ಗ್ರಾಮಸ್ಥರಲ್ಲಿ ಸರ್ಕಾರಿ ಶಾಲೆಯ ಮೇಲಿನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ.
ನಾಡಿನ್ಯೂಸ್ ನೊಂದಿಗೆ ಮಾತನಾಡಿದ ಶಿಕ್ಷಕಿ ರತ್ನಕುಮಾರಿ, ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆಗೆ ವಿಶೇಷ ಒತ್ತು ನೀಡಿದ್ದೇವೆ. ಮಕ್ಕಳು ಮುಂದೆ ಇಂಗ್ಲಿಷ್ ಮಾಧ್ಯಮದ ಪ್ರೌಢಶಾಲೆಗೆ ಸೇರಿದರೂ ಯಾವುದೇ ಹಿಂಜರಿಕೆಯಿಲ್ಲದೆ ಕಲಿಯುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿಯೇ ಇಂದು ಗ್ರಾಮಸ್ಥರು ಖಾಸಗಿ ಶಾಲೆಗಳಿಗಿಂತ ನಮ್ಮ ಶಾಲೆಯನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನೊಂದಿಗೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಅಂಬಿಕಾ, ನಮ್ಮ ಶಾಲೆಯ ಎಲ್ಲ ಶಿಕ್ಷಕರು, ಶಿಕ್ಷಣ ಇಲಾಖೆ, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರ ಸಹಕಾರ ದಿಂದ ಈ ಗೌರವ ದೊರೆತಿದೆ. ಆದ್ದರಿಂದ ಇದು ಇಡೀ ಸಮಟಗಾರು ಶಾಲೆಯ ಪ್ರಶಸ್ತಿ ಎಂದು ವಿನಮ್ರವಾಗಿ ಹೇಳಿದರು.
ಸಚಿವರ ಅಭಿನಂದನೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರಪತಿ ಅವರಿಂದ ಗೌರವ ಸ್ವೀಕರಿಸಲಿರುವ ರತ್ನಕುಮಾರಿ ಅವರ ಸಾಧನೆ ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
“ರಾಷ್ಟೀಯ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ರತ್ನಾಕುಮಾರಿ ಎಸ್ ಅವರಿಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು.

ಈ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನನ್ನೊಬ್ಬಳ ಸಾಧನೆಯಲ್ಲ. ನನ್ನೊಂದಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಇಡೀ ಸಮಟಗಾರು ಶಾಲಾ ಕುಟುಂಬಕ್ಕೆ ಈ ಗೌರವ ಅರ್ಪಿಸುತ್ತೇನೆ.
– ರತ್ನಕುಮಾರಿ ಎಸ್., ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ

ರತ್ನಕುಮಾರಿ ಮೇಡಂ ಅವರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೂ ಅಪಾರ ಸಂತೋಷ ತಂದಿದೆ. ಅವರೊಂದಿಗಿನ ಕೆಲಸದ ಅನುಭವ, ಮಕ್ಕಳ ಶಿಕ್ಷಣದ ಬಗ್ಗೆ ಅವರ ಯೋಚನೆಗಳು ಮತ್ತು ನಾವೀನ್ಯತೆ ಬೋಧನಾ ವಿಧಾನಗಳು ನಮಗೆ ಸದಾ ಪ್ರೇರಣೆಯಾಗಿವೆ. ಅವರು ಈ ಗೌರವ ಪಡೆಯುತ್ತಿರುವುದು ಇಡೀ ನಮ್ಮ ಶಾಲಾ ಕುಟುಂಬಕ್ಕೆ ಹೆಮ್ಮೆಯ ಕ್ಷಣ. – ಅಂಬಿಕಾ,ಶಿಕ್ಷಕಿ, ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
















Leave a Reply