ಕೋಣಂದೂರು: ಎಐ ಯುಗದಲ್ಲಿರುವ ನಾವು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸದುದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು ಎಂದು ಬೆಂಗಳೂರಿನ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕ ಸಿ.ಕೆ. ಮಂಜುನಾಥ್ ಹೇಳಿದರು.
ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ–1ರಲ್ಲಿ ‘ಕೃತಕ ಬುದ್ಧಿಮತ್ತೆ.. ಹಿತವೇ.. ಸಾಧನವೇ.. ಬೆದರಿಕೆಯೇ?’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಮಾತನಾಡಿದ ಅವರು, “ನಾವು ಮಾಡುವ ಆಲೋಚನೆಗಳಿಗೆ ತನ್ನ ಆಲೋಚನೆಯನ್ನು ತುಂಬುವ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ. ನಮ್ಮ ಆಸೆ-ಆಮಿಷಗಳಿಗಾಗಿ ಬೇರೆಯವರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಎಐ ಬಳಸಬಾರದು. ತಂತ್ರಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಬೇಕು” ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದ ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕೂ ಎಐ ಪರಿಣಾಮಕಾರಿಯಾಗಿದ್ದು, ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದ ಹಲವು ಸವಾಲುಗಳಿಗೆ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಇಂದಿನ ದಿನಗಳಲ್ಲಿ ಎಐ ಎಲ್ಲ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿದ್ದು, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿವೇಚನೆಯಿಂದ ಅರ್ಥಮಾಡಿಕೊಂಡು ಬಳಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
ಅತಿಯಾದ ಎಐ ಬಳಕೆಯಿಂದ ನೆನಪಿನ ಶಕ್ತಿ ಕುಗ್ಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ವಿವೇಕದಿಂದ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಕೆ.ಎಸ್. ವಾಸುದೇವ ವಹಿಸಿದ್ದರು. ಪಿಯು ವಿಭಾಗದ ಬಿ.ಕೆ. ಪ್ರಫುಲ್ಲ, ವಸತಿ ಶಾಲೆಯ ಎಚ್.ವಿ. ಮುರಳೀಧರ, ಸುಜಾತ ಮಹಾಲೆ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















Leave a Reply