ರಿಪ್ಪನ್ ಪೇಟೆ : ಸಮೀಪದ ಹೊಂಬುಜ ಜೈನ ಮಠದಲ್ಲಿ ಜೈನ ಮತದ 24ನೇ ತೀರ್ಥಂಕರರಾದ ಶ್ರೀ ಮಹಾವೀರ ತೀರ್ಥಂಕರರ 2625ನೇ ಜನ್ಮ ಕಲ್ಯಾಣೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪೀಠಾಧಿಪತಿ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, “ಭಗವಾನ್ ಶ್ರೀ ಮಹಾವೀರರ ಜೀವನವು ನಮಗೆ ಸಹಬಾಳ್ವೆ, ಸಾಮರಸ್ಯ, ಅಹಿಂಸಾ ಹಾಗೂ ಪರಿಸರ ರಕ್ಷಣೆಯ ಮಹತ್ವವನ್ನು ತಿಳಿಸುತ್ತದೆ. ಇಂದಿನ ಯುದ್ಧೋನ್ಮಾದದ ಜಗತ್ತಿನಲ್ಲಿ ಮಹಾವೀರರ ಸಂದೇಶ ಎಲ್ಲ ರಾಷ್ಟ್ರಗಳಿಗೂ ತಲುಪಬೇಕು” ಎಂದು ಹೇಳಿದರು.

ಶ್ರೀ ಮಹಾವೀರರ ಜಿನಬಿಂಬವನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಪ್ರಕಾರ್ಷಣ ಮಾಡಲಾಗಿದ್ದು, ‘ಅಹಿಂಸಾ ಪರಮೋ ಧರ್ಮ’, ‘ಶ್ರೀ ಮಹಾವೀರ ಸ್ವಾಮಿ ಜೈ’, ‘ಜೈನ ಧರ್ಮ ಕೀ ಜೈ’ ಎಂಬ ಘೋಷಣೆಗಳೊಂದಿಗೆ ಭಕ್ತರು ಮೆರವಣಿಗೆ ನಡೆಸಿದರು.
ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಅಧಿದೇವತೆ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀ ಮಹಾವೀರ ಸ್ವಾಮಿಯ ಜನ್ಮಾಭಿಷೇಕ ಮತ್ತು ನಾಮಕರಣ ವಿಧಿಗಳು ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಅನೇಕ ಭಕ್ತರು ಭಾಗವಹಿಸಿದ್ದರು.















Leave a Reply