ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ
ಹೊಸನಗರ: ಇಂಗ್ಲಿಷ್ ವ್ಯಾಮೋಹದ ಕಾರಣ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪೋಷಕರದ್ದೇ ಎಂದು ಮೂಲೆಗದ್ದೆ ಶಿವ ಯೋಗಶ್ರಮದ ಕಿರಿಯ ಶ್ರೀಗಳಾದ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಬಿಳೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ “ ಸುವರ್ಣ ಮಹೋತ್ಸವ” ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, “ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ. ಕನ್ನಡ ಶಾಲೆಯಲ್ಲಿ ಓದಿದವರು ಕೂಡ ವಿಶ್ವದಾದ್ಯಂತ ಯಶಸ್ವಿಯಾಗಿ ಬದುಕುತ್ತಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ” ಎಂದರು.
ಮುಖ್ಯ ಶಿಕ್ಷಕ ಹೆಚ್.ಆರ್. ಸುರೇಶ್ ಮಾತನಾಡಿ, ಗ್ರಾಮಾಂತರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ, ಉಚಿತ ಪುಸ್ತಕ, ಯೂನಿಫಾರಂ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳಿವೆ. ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವ ಬದಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಶ್ವಿನಿ ಶ್ರೀಕಾಂತ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಹೆಚ್. ಇ. ಕೃಷ್ಣಮೂರ್ತಿ, ಉಮೇಶ್, ಹೆಚ್.ಪಿ ಜಗದೀಶ್, ಹರೀಶ್ಕುಮಾರ್, ಕೆ.ಟಿ ತಿಮ್ಮಪ್ಪ, ಕೆ.ಎಲ್ ತಿಮ್ಮನಾಯ್ಕ, ಲೋಕನಾಯ್ಕ, ಹಾಲಪ್ಪ, ಎಸ್.ಡಿ ತಿಮ್ಮಪ್ಪ, ದೇವೆಂದ್ರಪ್ಪ, ಚೌಡಪ್ಪ, ಹಾಲಪ್ಪ, ರಾಜೇಶ್, ಕೇಶವ ಕೆ.ಟಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
















Leave a Reply