ಮಲೆನಾಡಿನ ಮಹತ್ವದ ಯೋಜನೆ: ರಿಪ್ಪನ್ ಪೇಟೆಗೆ ಬೇಕು ರೈಲು ನಿಲ್ದಾಣ
ವಿಶೇಷ ವರದಿ | ರಿಪ್ಪನ್ ಪೇಟೆ

ಶಿವಮೊಗ್ಗ-ಶೃಂಗೇರಿ-ಮಂಗಳೂರು ನೂತನ ರೈಲು ಮಾರ್ಗ ಯೋಜನೆ ಮಲೆನಾಡು ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ಇದೀಗ ರಿಪ್ಪನ್ ಪೇಟೆ ಪಟ್ಟಣದ ಜನರಲ್ಲಿ ಒಂದೇ ಪ್ರಶ್ನೆ ಕೇಳಿಬರುತ್ತಿದೆ “ನಮ್ಮ ಪಟ್ಟಣಕ್ಕೆ ರೈಲು ನಿಲ್ದಾಣ ಸಿಗುತ್ತದೆಯೇ?”
ಕೇಂದ್ರ ಸರ್ಕಾರವು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆ (FLS) ಹಾಗೂ ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗೆ ಅನುಮೋದನೆ ನೀಡಿರುವುದು ಯೋಜನೆಗೆ ಹೊಸ ಚೈತನ್ಯ ತಂದಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಮಾಹಿತಿ ಪ್ರಕಾರ, ಶೀಘ್ರದಲ್ಲೇ ರೈಲ್ವೆ ಇಲಾಖೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.
ಸುಮಾರು 3,300 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರೈಲು ಮಾರ್ಗವು ಸುಮಾರು 332 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಶಿವಮೊಗ್ಗದಿಂದ ಆರಂಭವಾಗಿ ಅರಸಾಳು, ರಿಪ್ಪನ್ ಪೇಟೆ, ಕೋಣಂದೂರು, ತೀರ್ಥಹಳ್ಳಿ, ಶೃಂಗೇರಿ, ಕಾರ್ಕಳ ಮಾರ್ಗವಾಗಿ ಮಂಗಳೂರು ತಲುಪುತ್ತದೆ ಎಂದು ಹೇಳಲಾಗಿದೆ.
ರಿಪ್ಪನ್ ಪೇಟೆ ಜನರಲ್ಲಿ ಆತಂಕ ಏಕೆ?
ಯೋಜನೆಯ ಪ್ರಾಥಮಿಕ ಚರ್ಚೆಗಳಲ್ಲಿ “ಅರಸಾಳು-ರಿಪ್ಪನ್ ಪೇಟೆ” ಮಾರ್ಗದ ಉಲ್ಲೇಖ ಕಂಡುಬಂದಿದ್ದರೂ, ಇದೀಗ ಕೆಲ ಮೂಲಗಳ ಪ್ರಕಾರ ರೈಲು ಮಾರ್ಗವು ರಿಪ್ಪನ್ ಪೇಟೆ ಪಟ್ಟಣವನ್ನು ಬಿಟ್ಟು ನೇರವಾಗಿ ಕೋಣಂದೂರು ಭಾಗದತ್ತ ಸಾಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ.
ಈ ವಿಚಾರ ರಿಪ್ಪನ್ ಪೇಟೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಪಟ್ಟಣದ ಸಮೀಪದಲ್ಲೇ ಮಾರ್ಗ ಹಾದುಹೋದರೂ ನಿಲ್ದಾಣವಿಲ್ಲದೆ ಮುಂದುವರಿದರೆ, ಭವಿಷ್ಯದ ಅಭಿವೃದ್ಧಿ ಅವಕಾಶಗಳಿಂದ ಪಟ್ಟಣ ವಂಚಿತವಾಗಬಹುದು ಎಂಬ ಚರ್ಚೆಗಳು ಜೋರಾಗಿವೆ.
ರಿಪ್ಪನ್ ಪೇಟೆಗೆ ರೈಲು ನಿಲ್ದಾಣ ಅನಿವಾರ್ಯ: ಸ್ಥಳೀಯ ವ್ಯಾಪಾರಿಗಳು, ಯುವಕರು ಹಾಗೂ ಸಾರ್ವಜನಿಕರ ಅಭಿಪ್ರಾಯದಂತೆ, ರಿಪ್ಪನ್ ಪೇಟೆ ಮಲೆನಾಡಿನ ಪ್ರಮುಖ ನಾಲ್ಕು ತಾಲೂಕುಗಳ ಕೇಂದ್ರಬಿಂದು ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ಶಿಕ್ಷಣ, ಕೃಷಿ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಈ ಭಾಗ ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ಇಲ್ಲಿ ರೈಲು ನಿಲ್ದಾಣ ಸ್ಥಾಪನೆಯಾದರೆ ಸಮಗ್ರ ಅಭಿವೃದ್ಧಿಗೆ ದಾರಿ ತೆರೆಯಲಿದೆ ಎನ್ನಲಾಗುತ್ತಿದೆ.
ಪ್ರಮುಖವಾಗಿ:
ಕೃಷಿ ಉತ್ಪನ್ನ ಸಾಗಣೆಗೆ ಅನುಕೂಲ,ವಿದ್ಯಾರ್ಥಿಗಳಿಗೆ ಸುಲಭ ಪ್ರಯಾಣ,ಪ್ರವಾಸೋದ್ಯಮಕ್ಕೆ ಉತ್ತೇಜನ,ಸ್ಥಳೀಯ ವ್ಯಾಪಾರ ವೃದ್ಧಿ,ಉದ್ಯೋಗಾವಕಾಶಗಳ ಹೆಚ್ಚಳ
ಇಂತಹ ಅನೇಕ ಲಾಭಗಳು ದೊರೆಯಲಿವೆ ಎಂಬುದು ಸಾರ್ವಜನಿಕರ ವಾದ.
ಅಭಿವೃದ್ಧಿಯಿಂದ ವಂಚಿತ ಪಟ್ಟಣಕ್ಕೆ ಹೊಸ ನಿರೀಕ್ಷೆ..
ಇದುವರೆಗೆ ಅನೇಕ ಮೂಲಸೌಕರ್ಯ ಅಭಿವೃದ್ಧಿಗಳಿಂದ ಹಿಂದೆ ಬಿದ್ದಿರುವ ರಿಪ್ಪನ್ ಪೇಟೆಗೆ ಈ ರೈಲು ನಿಲ್ದಾಣ “ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಲಿದೆ” ಎಂಬ ಭಾವನೆ ಜನರಲ್ಲಿ ವ್ಯಕ್ತವಾಗುತ್ತಿದೆ.
“ರಿಪ್ಪನ್ ಪೇಟೆ ಪಟ್ಟಣದ ಸಮೀಪ ಸೂಕ್ತ ಜಾಗ ಗುರುತಿಸಿ ರೈಲು ನಿಲ್ದಾಣ ನಿರ್ಮಿಸಿದರೆ, ಇಡೀ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ” ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹೊಸನಗರ ತಾಲೂಕಿನ ಬೇಡಿಕೆ : ಶಿವಮೊಗ್ಗ-ರಿಪ್ಪನ್ ಪೇಟೆ- ಹೊಸನಗರ-ತೀರ್ಥಹಳ್ಳಿ-ಶೃಂಗೇರಿ-ಕಾರ್ಕಳ-ಮಂಗಳೂರು ಈ ಮಾರ್ಗದಲ್ಲಿ ಹೋಗಬೇಕೆಂಬುದು ಹೊಸನಗರ ತಾಲೂಕಿನ ಜನರ ಇನ್ನೊಂದು ಬೇಡಿಕೆಯಾಗಿದೆ.
ಸಂಸದರೇ ನಿಮ್ಮ ಅಭಿವೃದ್ಧಿ ಹಸ್ತ ನಮ್ಮ ಮೇಲು ಚಾಚಿ : ಸ್ಥಳೀಯರು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದು, ರೈಲು ಮಾರ್ಗವು ರಿಪ್ಪನ್ ಪೇಟೆ ಮೂಲಕವೇ ಸಾಗುವಂತೆ ಹಾಗೂ ಪಟ್ಟಣಕ್ಕೆ ಪ್ರತ್ಯೇಕ ರೈಲು ನಿಲ್ದಾಣ ಮಂಜೂರು ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ಮಲೆನಾಡಿನ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದ್ದು, ಅದರ ಫಲ ರಿಪ್ಪನ್ ಪೇಟೆಗೂ ದೊರೆಯಬೇಕೆಂಬುದು ಇಲ್ಲಿನ ಜನರ ಏಕಮತದ ಆಶಯವಾಗಿದೆ.


















Leave a Reply