ಬಿಜೆಪಿ ಯಿಂದ ಸುದ್ದಿಗೋಷ್ಠಿ| ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಆಯ್ಕೆ
ರಿಪ್ಪನ್ ಪೇಟೆ : ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾಮಗಾರಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂದು ಬಿಜಿಪಿಯ ನೂತನ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದ್ರೇಶ್ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಇಲ್ಲಿನ ಗ್ರಾಮ ಪಂಚಾಯತಿಯ ಕುವೆಂಪು ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದ ಎನ್ ಸತೀಶ್ ಅವರು ಮಂಡಲ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮಹಾಶಕ್ತಿ ಕೇಂದ್ರ ಜವಾಬ್ದಾರಿಗಳು ತೆರವುಗೊಂಡಿತ್ತು. ಪಕ್ಷದ ಹಿರಿಯರ ಸೂಚನೆಯಂತೆ ಕೆರೆಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸುಂದ್ರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಡಿ ಮಲ್ಲಿಕಾರ್ಜುನ ಮತ್ತು ಕಟ್ಟೆ ಅರುಣ್ ಅವರನ್ನು ಆಯ್ಕೆ ಮಾಡಲಾಗಿ ಅಧಿಕೃತವಾಗಿ ಆದೇಶವನ್ನು ಮಂಡಲ ಅಧ್ಯಕ್ಷರಾದ ಎನ್. ಸತೀಶ್ ಅವರು ಹೊರಡಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಸುಂದ್ರೇಶ್ ಮಾತನಾಡಿ ಪಕ್ಷದ ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದು ಹಿರಿಯರ ಮಾರ್ಗದರ್ಶನದೊಂದಿಗೆ ಪಕ್ಷ ಹೇಳುವ ಕೆಲಸವನ್ನು ಚಾಚು ತಪ್ಪದೇ ಮಾಡುತ್ತೇವೆ. ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇವೆ ಎಂದರು.
ನೂತನ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಜಿ.ಡಿ ಮಲ್ಲಿಕಾರ್ಜುನ ಮಾತನಾಡಿ ಪಕ್ಷದ ಹಿರಿಯರು ನಮ್ಮ ಮೇಲೆ ವಿಶ್ವಾಸವನ್ನಿಟ್ಟು ಜವಾಬ್ದಾರಿ ನೀಡಿದ್ದಾರೆ ಪಕ್ಷದ ಆಶಯದಂತೆ, ಸೂಚನೆಯಂತೆ ನಾವು ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ವೈಫಲ್ಯ : ನಮ್ಮ ಭಾಗದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ ಅವರು ರಿಪ್ಪನ್ ಪೇಟೆ ಸಮುದಾಯ ಆಸ್ಪತ್ರೆ ಬಹು ವರ್ಷಗಳ ಬೇಡಿಕೆಯಾಗಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಸಮುದಾಯ ಆಸ್ಪತ್ರೆಯ ನಿರ್ಮಾಣಕ್ಕಾಗಿ ಶ್ರಮಿಸಲಾಗಿತ್ತು.ಆದರೆ ಈಗ ಆ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರು. ಅದರೊಂದಿಗೆ ನಮ್ಮ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಸರ್ಕಾರದ ವೈಫಲ್ಯದ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿ ಈ ಭಾಗದ ಅಭಿವೃದ್ಧಿಗಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ಬೆಳ್ಳೂರು ತಿಮ್ಮಪ್ಪ, ಸುಧೀಂದ್ರ ಪೂಜಾರಿ, ರಾಜೇಶ್ ಬುಕ್ಕಿವರೆ, ಕುಮಾರ್ ಕಳಸೆ , ಮಹೇಶ್, ವೆಂಕಟರಮಣ ಚಿಕ್ಕಜೀನಿ, ಓಮಿನಿ ಸುಧೀಂದ್ರ,ಮುರುಳಿ, ಕಗ್ಗಲಿ ಲಿಂಗಪ್ಪ, ಗಣೇಶ್, ನಾರಾಯಣ ಬೇಕರಿ,ಮಹಿಳಾ ಪ್ರಮುಖರಾದ ಪದ್ಮ ಸುರೇಶ್, ನಾಗರತ್ನ ದೇವರಾಜ್,ರೇಖಾ ರವಿ, ದಾನಮ್ಮ, ಮಂಜುಳಾ ಕೆತಾರ್ಜಿ,ವಿಮಲಮ್ಮ ಮತ್ತು ಅನೇಕರು ಹಾಜರಿದ್ದರು.















Leave a Reply