ಸಾಗರ: ಜಾನುವಾರುಗಳಿಗೆ ಮೇವು ತರಲು ಕಾಡಿಗೆ ತೆರಳಿದ್ದ ಯುವಕನೊಬ್ಬ ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ತಾಲೂಕಿನ ಉಳ್ಳೂರು ಸಮೀಪದ ಮಂಚಾಲೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಂಚಾಲೆ ಗ್ರಾಮದ ನಿವಾಸಿ ಹೇಮಂತ್ (27), ತಂದೆ ರಾಜು ಎಂದು ಗುರುತಿಸಲಾಗಿದೆ. ಫೆಬ್ರವರಿ 14ರ ಶನಿವಾರ ಎಂದಿನಂತೆ ಜಾನುವಾರುಗಳಿಗೆ ಮೇವು ಮತ್ತು ಸೊಪ್ಪು ತರಲು ಬಾಳೆಗುಂಡಿ ಕಾಡಿಗೆ ತೆರಳಿದ್ದ ಹೇಮಂತ್, ಮರ ಹತ್ತಿ ಸೊಪ್ಪು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ರೆಂಬೆ ಮರ್ಮಾಂಗಕ್ಕೆ ತಾಗಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಹೇಮಂತ್ ಅವರನ್ನು ಅಲ್ಲಿಂದ ಸಾಗುತ್ತಿದ್ದ ಸಾರ್ವಜನಿಕರು ಗಮನಿಸಿ ತಕ್ಷಣ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರನ್ನು ಸಾಗರದ ಭಾಗವತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಆದರೆ ದಾರಿಯ ಮಧ್ಯೆ ತೀರ್ಥಹಳ್ಳಿ ಬಳಿ ಆರೋಗ್ಯ ಏರುಪೇರಾದ ಕಾರಣ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಯುವ ವಯಸ್ಸಿನಲ್ಲೇ ಸಂಭವಿಸಿದ ಈ ದುರಂತದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೇವು ತರಲು ಕಾಡಿಗೆ ತೆರಳುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














Leave a Reply