ರಾಷ್ಟ್ರೋತ್ಥಾನ ಶಿಶುಮಂದಿರದಲ್ಲಿ ಮಕ್ಕಳ ಸಂತೆಯ ಸಂಭ್ರಮ
ರಿಪ್ಪನ್ ಪೇಟೆ : ರಾಷ್ಟ್ರೋತ್ಥಾನ ಶಿಶುಮಂದಿರವು ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ಇವೆಲ್ಲವೂ ನೀಡುವುದರೊಂದಿಗೆ ವ್ಯಾಪಾರ ಮನೋಭಾವನೆ, ವ್ಯಾಪಾರದ ಕೌಶಲ್ಯ ಜೀವನೋಪಾಯಕ್ಕೆ ಬೇಕಾಗಿರುವಂತಹ ಶಿಕ್ಷಣವನ್ನು ನೀಡುವ ಸಲುವಾಗಿ ಮಕ್ಕಳ ಸಂತೆಯನ್ನು ಕಳೆದ ಐದು ವರ್ಷಗಳಿಂದ ಆಯೋಜನೆ ಮಾಡಿಕೊಂಡು ಬಂದಿದ್ದೇವೆ ಜೊತೆಗೆ ಮಕ್ಕಳ ಸಂತೆಗೆ ಪೋಷಕರು ಸಹ ಸಹಕರಿಸುತ್ತಿದ್ದಾರೆ ಎಂದು ಶಿಶುಮಂದಿರದ ಅಧ್ಯಕ್ಷರಾದ ರತ್ನಾಕರಾವ್ ಅವರು ಹೇಳಿದರು.

ಪಟ್ಟಣದ ಶಿಶುಮಂದಿರದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಶಿಶುಮಂದಿರದ ಗಾಯತ್ರಿ ಮಾತಾಜಿ ಮಾತನಾಡಿ ಮಕ್ಕಳಿಂದ- ಮಕ್ಕಳಿಗಾಗಿ- ಮಕ್ಕಳಿಗೋಸ್ಕರವೇ ಮಕ್ಕಳ ಸಂತೆಯನ್ನು ಶಿಶುಮಂದಿರದಲ್ಲಿ ಆಯೋಜಿಸುತ್ತಿದ್ದೇವೆ ಮಕ್ಕಳಿಗೆ ಹಣಕಾಸಿನ ಲೆಕ್ಕಾಚಾರ,ವ್ಯವಹಾರಿಕ ಕೌಶಲ್ಯಗಳನ್ನು ನೀಡುವುದು ಸಂತೆಯ ಉದ್ದೇಶವಾಗಿದೆ ಎಂದರು.

ಉತ್ತಮ ಸಂಸ್ಕಾರದೊಂದಿಗೆ,ವ್ಯವಹಾರಿಕ ಜ್ಞಾನವನ್ನು ಕೊಡುವುದು ಮತ್ತು ಅವರಲ್ಲಿ ಉತ್ಸಾಹ,ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಇಂತಹ ಕಾರ್ಯಕ್ರಮವನ್ನು ಆಗಾಗೇ ಆಯೋಜಿಸುತ್ತೇವೆ ಎಂದು ಸುಮಾ ಮಾತಾಜಿ ಹೇಳಿದರು.

ಸ್ಥಳೀಯವಾಗಿ ಆಯೋಜಿಸಲಾದ “ಮಕ್ಕಳ ಸಂತೆ” ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ತಮ್ಮ ಪೋಷಕರೊಂದಿಗೆ ತರಕಾರಿ, ಹೂವು,ಹಣ್ಣು-ಹಂಪಲು ಹಾಗೂ ಮನೆಯಲ್ಲಿ ತಯಾರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸಿದರು. ಸಣ್ಣ ಸಣ್ಣ ಮಳಿಗೆಗಳನ್ನು ಹಾಕಿಕೊಂಡು ಆತ್ಮವಿಶ್ವಾಸದಿಂದ ಗ್ರಾಹಕರನ್ನು ಆಕರ್ಷಿಸಿದ ಮಕ್ಕಳು, ಬೆಲೆ ಹೇಳುವುದು, ಹಣ ಪಡೆಯುವುದು, ಉಳಿದ ಹಣ ಹಿಂತಿರುಗಿಸುವುದು ಸೇರಿದಂತೆ ವ್ಯಾಪಾರದ ಅಂಶಗಳನ್ನು ಅನುಭವದ ಮೂಲಕ ಕಲಿತರು.
“ಮಕ್ಕಳಿಗೆ ಓದಿನ ಜೊತೆಗೆ ವ್ಯವಹಾರಿಕ ಜ್ಞಾನವೂ ಸಿಗುತ್ತಿರುವುದು ನಮಗೆ ತುಂಬಾ ಖುಷಿಯಾಗಿದೆ. ನಲಿ–ಕಲಿ ರೀತಿಯ ಈ ಕಾರ್ಯಕ್ರಮಗಳು ಅವರ ಭವಿಷ್ಯಕ್ಕೆ ತುಂಬಾ ಉಪಯುಕ್ತ,”
- ಗಣೇಶ್.ಆರ್, ಪೋಷಕರು

ಈ ಸಂತೆ ಮಕ್ಕಳಲ್ಲಿ ಹಣದ ಮೌಲ್ಯ, ಪರಿಶ್ರಮದ ಮಹತ್ವ ಮತ್ತು ಸ್ವಾವಲಂಬನೆ ಬಗ್ಗೆ ಅರಿವು ಮೂಡಿಸುವ ಉತ್ತಮ ಪ್ರಯತ್ನವಾಗಿತ್ತು. ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ, ಸ್ಥಳೀಯರು ಸಹ ಉತ್ಸಾಹದಿಂದ ಖರೀದಿ ಮಾಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಒಟ್ಟಾರೆ, “ಮಕ್ಕಳ ಸಂತೆ” ಪುಟಾಣಿಗಳ ಪ್ರತಿಭೆ, ಸೃಜನಶೀಲತೆ ಮತ್ತು ವ್ಯಾಪಾರ ಮನೋಭಾವವನ್ನು ಬೆಳೆಸುವ ಸಾರ್ಥಕ ಕಾರ್ಯಕ್ರಮವಾಗಿ ಗಮನಸೆಳೆದಿತು.
ಈ ಸಂದರ್ಭದಲ್ಲಿ ಸುಮಾ ಮಾತಾಜಿ, ವಿಘ್ನೇಶ್ ಪ್ರಭು, ಹರೀಶ್ ಶಂಕರ್ ಸರಾಫ್, ಶೀಲಾ ಆರ್.ಡಿ, ಯಶೋಧ, ನಾಗಾರ್ಜುನ, ಪವನ್ ಶೆಟ್ಟಿ, ದೀಪಾ ಗಣೇಶ್, ಮತ್ತು ಅನೇಕ ಪೋಷಕರು ಹಾಜರಿದ್ದರು.
#shivamogga















Leave a Reply